ಗದಗ: ಜಿಲ್ಲೆಯ ವಿವಿಧೆಡೆ ನಡೆಯಲಿದ್ದ ಆರು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಡೆದಿದ್ದಾರೆ. ಬಾಲಕಿಯರನ್ನು ರಕ್ಷಿಸಿ ಸರ್ಕಾರಿ ಬಾಲಮಂದಿರದಲ್ಲಿ ರಕ್ಷಣೆ ಒದಗಿಸಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಶಾಂತಗೇರಿ (1), ಕೊತಬಾಳ (2), ಯಾ.ಸ ಹಡಗಲಿ (1), ಮುಂಡರಗಿ ತಾಲ್ಲೂಕಿನ ಪೇಠಾಲೂರು (1) ಹಾಗೂ ಗದಗ ತಾಲ್ಲೂಕಿನ ಹಾತಲಗೇರಿ (1) ಗ್ರಾಮಗಳಲ್ಲಿ ಹಸೆಮಣೆ ಏರಲಿದ್ದ 12ರಿಂದ 17 ವರ್ಷದೊಳಗಿನ ಬಾಲಕಿಯರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವಿನಾಶಲಿಂಗ ಗೋಟಖಿಂಡಿ ಮಾರ್ಗದರ್ಶನದಲ್ಲಿ ರೋಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಬಸಮ್ಮ ಹೂಲಿ, ಹುಲಿಗೆಮ್ಮ ಜೋಗೆರ ಸಿಬ್ಬಂದಿಯಾದ ರಾಘವೇಂದ್ರ ಕೌಜಗೇರಿ, ಕೆ.ಜಿ ಅಂಬಿಗೇರ, ಸುವರ್ಣಾ ಹಾನಾಪುರ, ಫಾರುಖ್ ದಳವಾಯಿ ಹಾಗೂ ಬೈಲಪ್ಪ ಗೌಡ ಮಲ್ಲನಗೌಡರ, ಪ್ರವೀಣಕುಮಾರ ಬೆಟಗೇರಿ, ಸವಿತಾ ಹರ್ತಿ, ಲಲಿತಾ ಕುಂಬಾರ, ಅಶೋಕ ಸುಣಗಾರ, ಪೊಲೀಸ್ ಇಲಾಖೆ ಸಿಬ್ಬಂದಿ ಬಸವರೆಡ್ಡಿ ರಿತ್ತಿ, ಎಂ.ಪಿ.ಪಾಟೀಲ ರೋಣ, ಅಚಲೇಶ ಹೊನ್ನಿನಾಯ್ಕರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬಾಲಕಿಯರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಅವರ ಎದುರಿಗೆ ಹಾಜರುಪಡಿಸಲಾಯಿತು. ಮುಂದಿನ ವಿಚಾರಣೆ ಬಾಕಿ ಇರಿಸಿ, ತಾತ್ಕಾಲಿಕ ರಕ್ಷಣೆಗಾಗಿ ಬಾಲಕಿಯರನ್ನು ಸರ್ಕಾರಿ ಬಾಲಮಂದಿರಕ್ಕೆ ಕರೆದೊಯ್ಯಲಾಯಿತು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವಿನಾಶಲಿಂಗ ಗೋಟಖಿಂಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.