ADVERTISEMENT

ಗದಗ: ಬಡವರಿಗೆ ಆಹಾರ ಕಿಟ್ ವಿತರಿಸಿ

ಲಸಿಕೆ ನೀಡುವುದಾಗಿ ಮಾತು ತಪ್ಪಿದ ಸರ್ಕಾರ: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮೇ 2021, 4:28 IST
Last Updated 9 ಮೇ 2021, 4:28 IST
ನರಗುಂದದಲ್ಲಿ ಕಾಂಗ್ರೆಸ್ ಪಕ್ಷದ ಆಶ್ರಯದಲ್ಲಿ ಕೋವಿಡ್ ಸೋಂಕಿತರಿಗಾಗಿ ಉಚಿತ ಆಂಬುಲನ್ಸ್‌ ಸೇವೆಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಪಾಟೀಲ ಚಾಲನೆ ನೀಡಿದರು
ನರಗುಂದದಲ್ಲಿ ಕಾಂಗ್ರೆಸ್ ಪಕ್ಷದ ಆಶ್ರಯದಲ್ಲಿ ಕೋವಿಡ್ ಸೋಂಕಿತರಿಗಾಗಿ ಉಚಿತ ಆಂಬುಲನ್ಸ್‌ ಸೇವೆಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಪಾಟೀಲ ಚಾಲನೆ ನೀಡಿದರು   

ನರಗುಂದ: ಕೋವಿಡ್ ನಿಯಂತ್ರಣಕ್ಕೆ ಎಲ್ಲ ರೀತಿಯ ಸಹಕಾರ ನಮ್ಮ ಪಕ್ಷ ನೀಡುತ್ತಿದೆ. ಈಗ ಉಚಿತ ಆಂಬುಲೆನ್ಸ್ ಸೇವೆ ಒದಗಿಸುತ್ತಿದೆ. ಆದರೆ ಸರ್ಕಾರ ಜನರು ಹೊರಬರದಂತೆ ಮಾಡಿ ಕಠಿಣ ನಿಯಮ ಜಾರಿಗೊಳಿಸಬೇಕು. ಬಡವರಿಗೆ, ಕೂಲಿಕಾರರಿಗೆ ಸರ್ಕಾರ ಸ್ಥಳೀಯ ಸಂಸ್ಥೆಗಳ ಮೂಲಕ ಮನೆಮನೆಗಳಿಗೆ ತೆರಳಿ ಆಹಾರ ಕಿಟ್ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಘಟಕದ ಅಧ್ಯಕ್ಷ ಜಿ.ಎಸ್.ಪಾಟೀಲ ಆಗ್ರಹಿಸಿದರು.

ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಜಿಲ್ಲಾ ಘಟಕ, ನರಗುಂದ ಹಾಗೂ ಹೊಳೆ ಆಲೂರ ಬ್ಲಾಕ್ ಘಟಕಗಳು , ಬಿ.ಆರ್.ಯಾವಗಲ್ ಅಭಿಮಾನಿ ಬಳಗ ಹಾಗೂ ಮಲಪ್ರಭಾ ಆಯಿಲ್ ಮಿಲ್ ಆಶ್ರಯದಲ್ಲಿ ಕೋವಿಡ್‌ ಸೋಂಕಿತರಿಗಾಗಿ ಉಚಿತ ಆಂಬುಲೆನ್ಸ್‌ ಸೇವೆಗೆ ಚಾಲನೆ ನೀಡಿ ಮಾತನಾಡಿದರು.

ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬುವ ಹಾಗೂ ಅಗತ್ಯ ಸೌಲಭ್ಯ ಒದಗಿಸುವ ಕೆಲಸ ನಿರಂತರ ನಡೆದಿದೆ. ಎರಡನೇ ಅಲೆ ಜೋರಾಗಿರುವ ಪರಿಣಾಮ ಜೂಮ್‌ ಮೀಟಿಂಗ್‌ ಮೂಲಕ ಅವರ ಜತೆ ಸಂಪರ್ಕ ಹೊಂದಲಾಗುತ್ತಿದೆ. 18 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುತ್ತೇನೆ ಎಂದು ಹೇಳಿದ ಸರ್ಕಾರ ಮಾತಿಗೆ ತಪ್ಪಿದೆ ಎಂದರು.

ADVERTISEMENT

ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಾರಣ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಹುಬ್ಬಳ್ಳಿಯಲ್ಲಿ ರೈಲಿನ ಕೋಚ್‍ಗಳಲ್ಲಿ ಆಸ್ಪ್ರತ್ರೆ ನಿರ್ಮಿಸಲಾಗುತ್ತಿದೆ. ಅದರಲ್ಲಿ ಗದಗ ಜಿಲ್ಲೆಗೆ ಆದ್ಯತೆ ನೀಡಿಲ್ಲ. ಇದು ಸಲ್ಲದು. ಗದಗ ಜಿಲ್ಲಗೆ ಒಂದು ಕೋಚ್ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಬಿ.ಆರ್.ಯಾವಗಲ್ ಮಾತನಾಡಿ, ಪಟ್ಟಣದಲ್ಲಿ ಕೋವಿಡ್ ಸೋಂಕಿತ ಸಕ್ರಿಯ ಪ್ರಕರಣಗಳು 58 ಎಂದು ಹೇಳಲಾಗುತ್ತಿದೆ. ಇದರಾಚೆಯೂ ಸೋಂಕಿತರು ಇದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ಪತ್ತೆ ಹಚ್ಚುವ ಕೆಲಸ ಜಿಲ್ಲಾಡಳಿತದಿಂದ ನಡೆಯಬೇಕಿದೆ ಎಂದರು.

ಕಾಂಗ್ರೆಸ್ ಪಕ್ಷ ಎರಡು ಬ್ಲಾಕ್‍ಗಳಲ್ಲಿ ಸಹಾಯವಾಣಿ ಆರಂಭಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿಠ್ಠಲರಡ್ಡಿ ಮೇಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ ಯಾವಗಲ್, ಎಂ.ಬಿ.ಕೋಳೇರಿ, ರಾಜು ಕಲಾಲ, ಟಿ.ಬಿ.ಶಿರಿಯಪ್ಪಗೌಡ್ರ, ಪ್ರಕಾಶ ಹಡಗಲಿ, ಗುರುಪಾದಪ್ಪ ಕುರಹಟ್ಟಿ, ವಿಠ್ಠಲ ಶಿಂಧೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.