ADVERTISEMENT

ಕೋವಿಡ್‌; ಕಠಿಣ ನಿಯಮ ಜಾರಿ

ಸೋಂಕು ನಿಯಂತ್ರಣಕ್ಕೆ ಸಮನ್ವಯದಿಂದ ಕೆಲಸ ಮಾಡುವಂತೆ ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 5:13 IST
Last Updated 28 ಏಪ್ರಿಲ್ 2021, 5:13 IST
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಡಿಯೊ ಕಾನ್ಭರೆನ್ಸ್‌ನಲ್ಲಿ ಎಂ.ಸುಂದರೇಶ್‌ ಬಾಬು ಮಾತನಾಡಿದರು. ಎಸ್‌ಪಿ ಯತೀಶ್‌ ಎನ್‌., ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್‌. ಇದ್ದಾರೆ.
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಡಿಯೊ ಕಾನ್ಭರೆನ್ಸ್‌ನಲ್ಲಿ ಎಂ.ಸುಂದರೇಶ್‌ ಬಾಬು ಮಾತನಾಡಿದರು. ಎಸ್‌ಪಿ ಯತೀಶ್‌ ಎನ್‌., ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್‌. ಇದ್ದಾರೆ.   

ಗದಗ: ‘ಸರ್ಕಾರದ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಏ.27ರ ರಾತ್ರಿ 9ರಿಂದ ಮೇ 12ರ ಬೆಳಿಗ್ಗೆ 6ರವರೆಗೆ ಕಠಿಣ ನಿಯಮಗಳು ಜಾರಿಯಲ್ಲಿರುತ್ತವೆ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ತಹಶೀ ಲ್ದಾರರು, ಪೊಲೀಸ್‌ ಅಧಿಕಾರಿಗಳು, ಇಒ, ಗದಗ-ಬೆಟಗೇರಿ ನಗರಸಭೆ ಪೌರಾ ಯುಕ್ತ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಜತೆಗೆ ನಡೆದ
ವಿಡಿಯೊ ಸಂವಾದದಲ್ಲಿ ಮಾತನಾಡಿ, ‘ಪ್ರತಿ ದಿನ ಬೆಳಿಗ್ಗೆ 6ರಿಂದ 10ರ ವರೆಗೆ ದಿನಸಿ, ಹಣ್ಣು, ಹಾಲು, ತರಕಾರಿ, ಮಾಂಸದ ಮಳಿಗೆಗೆಳು ತೆರೆದಿರುತ್ತವೆ. ಈ ಸಂದರ್ಭದಲ್ಲಿ ಜನ ದಟ್ಟಣೆಯಾಗದಂತೆ ನಿಗಾವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಸರ್ಕಾರಿ ಹಾಗೂ ಖಾಸಗಿ ಬಸ್‌ ಸಂಚಾರ ಸಂಪೂರ್ಣ ಬಂದ್‌ ಮಾಡ ಲಾಗಿದ್ದು ಅಂತರ ಜಿಲ್ಲಾ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಕರ್ತವ್ಯದಲ್ಲಿರುವ ಅಧಿಕಾರಿಗಳ ಪ್ರಯಾಣಕ್ಕೆ ಅವಕಾ ಶವಿದ್ದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿ ಮತ್ತು ಅವರನ್ನು ನೋಡಿಕೊಳ್ಳುವವರ ಸಂಚಾರಕ್ಕೆ ಹೆಚ್ಚಿನ ದಾಖಲೆಗಳ ಅವಶ್ಯಕತೆ ಇರುವುದಿಲ್ಲ’ ಎಂದರು.

ADVERTISEMENT

ನಗರ ಹಾಗೂ ತಾಲ್ಲೂಕು ಮಟ್ಟ ದಲ್ಲಿ ಮನೆಗೆ ಆಹಾರ ತಲುಪಿಸಲು ಆಸಕ್ತ ರಿರುವ ಹೋಟೆಲ್‌ಗಳನ್ನು ಗುರುತಿಸಿ ಮಾರ್ಗಸೂಚಿಗಳನ್ವಯ ಆಹಾರ ಸರಬರಾಜು ಮಾಡಲು ಅಗತ್ಯದ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮಾತನಾಡಿ, ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳ ಕುರಿತು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳ ಮೂಲಕ ಜಾಗೃತಿ ಮೂಡಿಸಬೇಕು. ಮಾರ್ಗಸೂಚಿಗಳನ್ವಯ ಅಗತ್ಯ ವಸ್ತುವಗಳ ಖರೀದಿಗಾಗಿ ಬೆಳಿಗ್ಗೆ 6ರಿಂದ 10 ರವರೆಗೆ ಅವಕಾಶವಿದ್ದು ಇವುಗಳ ಕಟ್ಟುನಿಟ್ಟಿನ ಪಾಲನೆಗೆ ನಿಯೋಜಿಸಲಾದ ಸಿಬ್ಬಂದಿ 6 ಗಂಟೆಗೂ ಮುಂಚೆ ಮಾರುಕಟ್ಟೆಗೆ ಬಂದು ಜನದಟ್ಟಣೆ ಆಗದಂತೆ ನಿಗಾವಹಿಸಬೇಕು. ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ಹಾಗೂ ದೂರು ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಎಡಿಸಿ ಸತೀಶ್ ಕುಮಾರ ಎಂ., ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗೆರೆ ಇದ್ದರು

‘ಸಂತೆಗಳನ್ನು ಮೈದಾನಕ್ಕೆ ಸ್ಥಳಾಂತರಿಸಿ’

ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್. ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸಂತೆಗಳನ್ನು ಮೈದಾನಕ್ಕೆ ಸ್ಥಳಾಂತರಿಸಬೇಕು. ಮಾರ್ಗಸೂಚಿಗಳ ಪಾಲನೆಗಾಗಿ ಗ್ರಾಮ ಪಂಚಾಯ್ತಿಗಳಲ್ಲೂ ತಂಡಗಳನ್ನು ರಚಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಮನೆಗೆ ನಿಯಮಿತವಾಗಿ ಭೇಟಿ ನೀಡಿ ವರದಿ ನೀಡಬೇಕು ಎಂದು ಇಒಗಳಿಗೆ ಸೂಚನೆ ನೀಡಿದರು.

ಪೊಲೀಸ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅದಕ್ಕೂ ಮೀರಿ ಸಾರ್ವಜನಿಕರು ಪೊಲೀಸರ ಜತೆಗೆ ಅನುಚಿತವಾಗಿ ವರ್ತಿಸಿದರೆ ಕ್ರಮ ಜರುಗಿಸಿ.

ಯತೀಶ್‌ ಎನ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.