ಮುಂಡರಗಿ: ‘ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಗೊಲ್ಲರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ತಕ್ಷಣ ಅಖಂಡ ಕರ್ನಾಟಕದ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು’ ಎಂದು ಒತ್ತಾಯಿಸಿ ತಾಲ್ಲೂಕು ಗೊಲ್ಲ ಯಾದವ ಸಂಘದ ಸದಸ್ಯರು ಸೋಮವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
‘ಗೊಲ್ಲ ಸಮುದಾಯವು ಶೋಷಿತ ಜನಾಂಗವಾಗಿದ್ದು ಹಲವು ದಶಕಗಳಿಂದ ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದೆ. ಹೀಗಾಗಿ ರಾಜ್ಯದಲ್ಲಿ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
‘ಯಾದವ, ಹನುಮ ಸೇರಿದಂತೆ ಕೆಲವೇ ಕೆಲವು ಸಮುದಾಯಗಳು ಮಾತ್ರ ಗೊಲ್ಲ ಸಮುದಾಯದಲ್ಲಿ ಬರುತ್ತವೆ. ಅವೆಲ್ಲವನ್ನೂ ಕಡೆಗಣಿಸಿ ಸರ್ಕಾರ ಕೇವಲ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಬಹುಸಂಖ್ಯಾತ ಗೊಲ್ಲ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ.
ಹೀಗಾಗಿ ಮುಖ್ಯಮಂತ್ರಿಗಳು ಪುನಃ ಪರಿಶೀಲಿಸಿ ಕಾಡುಗೊಲ್ಲ ಬದಲಾಗಿ ಕೇವಲ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರೆ ಇಡೀ ಗೊಲ್ಲ ಜನಾಂಗಕ್ಕೆ ಅನುಕೂಲವಾಗಲಿದೆ. ಇಲ್ಲವಾದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ರಾಘವೇಂದ್ರ ಡೊಂಬರ ಮನವಿ ಸ್ವೀಕರಿಸಿದರು. ತಾಲ್ಲೂಕು ಗೊಲ್ಲ ಯಾದವ ಸಂಘದ ಅಧ್ಯಕ್ಷ ಬಲರಾಮಪ್ಪ ಗಾಳೆಪ್ಪನವರ, ಗಿರೀಶ ದಾಸರ, ನಾರಾಯಣಗೌಡ ಪಾಟೀಲ, ಮಲ್ಲಿಕಾರ್ಜುನ ಗೊಲ್ಲರ, ವೀರೇಶ ಗೊಲ್ಲರ, ವೆಂಕಟೇಶ ಹೊಸೂರು, ಗದ್ದಿಗೇಪ್ಪ ಹಿರೇಹೋಳಿ, ಮಂಜುನಾಥ ಗೋಲ್ಲರ, ವೆಂಕಟೇಶಗೌಡ ಪಾಟೀಲ, ಬಸಪ್ಪ ಹಿರೇಹೊಳಿ, ನಾಗರಾಜ ಗೊಲ್ಲರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.