ಗಜೇಂದ್ರಗಡ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆ ನಡೆಸದೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಒತ್ತಾಯಿಸಿ ಇಲ್ಲಿನ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಮಂಗಳವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
‘ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಏಕತೆ ನಾಶ ಮಾಡಲು ಕೆಲವು ದುಷ್ಟಶಕ್ತಿಗಳು ಪ್ರಯತ್ನಿಸುತ್ತಿವೆ. ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕಬೇಕೆಂಬ ಅನಗತ್ಯ ಚರ್ಚೆ ಹುಟ್ಟು ಹಾಕಲಾಗಿದೆ. ಮೀಸಲಾತಿ ಕುರಿತಂತೆ ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ಒಡೆದು ಆಳುವ ನೀತಿಯನ್ನು ಅನುಸರಿಸಲು ಯತ್ನಿಸಲಾಗುತ್ತಿದೆ’ ಎಂದು ದೂರಿದರು.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಬಹಿರಂಗ ಚರ್ಚೆಯಿಲ್ಲದೆ ಏಕಪಕ್ಷಿಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು. ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಮತ್ತು ಆಸಕ್ತರಿಗೆ, ಸಂಘ-ಸಂಸ್ಥೆಗಳಿಗೆ ಈ ವರದಿ ದೃಢೀಕೃತ ಪ್ರತಿ ನೀಡಬೇಕು. ಆಕ್ಷೇಪಣೆ, ತಕರಾರು ಮತ್ತು ನ್ಯಾಯಸಮ್ಮತ ತಿದ್ದುಪಡಿಗಳನ್ನು ಸೂಚಿಸಲು ಕಾಲಾವಕಾಶ ನೀಡಬೇಕು. ಮೀಸಲಾತಿ ಹೆಚ್ಚಳಕ್ಕಾಗಿ ಮಾಡಿರುವ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಬೇಕು. ವಾಸ್ತವ ಸ್ಥಿತಿಗತಿ ಅರಿಯಲು ಹಿಂದಿನ ಸರ್ಕಾರ ತಯಾರಿಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದರು.
ನಂತರ ಶಿರಸ್ತೇದಾರ ಬಿ.ಎಫ್.ಪಾಟೀಲ ಅವರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಯಲ್ಲಪ್ಪ ಬಂಕದ, ಶರಣಪ್ಪ ಚಳಗೇರಿ, ಎಫ್.ಎಸ್.ಕರಿದುರಗನವರ, ವೆಂಕಟೇಶ ಮುದಗಲ್, ಬಸವರಾಜ ಬಂಕದ, ಮುದಿಯಪ್ಪ ಮುಧೋಳ, ಹನಮಂತಪ್ಪ ಕಲ್ಲೊಡ್ಡರ, ಶಣ್ಮುಖಪ್ಪ ಚಿಲಝರಿ, ನಾಗಪ್ಪ ಶಿಪ್ರಿ, ಉಮೇಶ ರಾಠೋಡ, ಈಶಪ್ಪ ರಾಠೋಡ, ಪರಸಪ್ಪ ಗುಗಲೋತ್ತರ, ವಿಠ್ಠಲ ರಾಠೋಡ, ರೂಪ್ಲೇಶ ರಾಠೋಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.