ಗದಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಸವರಾಜ ಬಳ್ಳಾರಿ ಆಯ್ಕೆಯಾದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಘಟಕದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ನಾಗರಾಜ ಹಳ್ಳಿಕೇರಿ ಮತ್ತು ಬಸವರಾಜ ಬಳ್ಳಾರಿ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಪರಿಶೀಲನೆ ನಂತರ ಚುನಾವಣೆ ನಡೆಯಿತು. ಒಟ್ಟು 69 ಮತದಾರರಿದ್ದು, ಅದರಲ್ಲಿ 68 ಮಂದಿ ಮತ ಚಲಾಯಿಸಿದರು. ಈ ಪೈಕಿ ನಾಗರಾಜ ಹಳ್ಳಿಕೇರಿ 13 ಮತಗಳನ್ನು ಪಡೆದರೆ; ಬಸವರಾಜ ಬಳ್ಳಾರಿ 55 ಮತಗಳನ್ನು ಪಡೆದು ವಿಜಯಶಾಲಿಯಾದರು.
ಬಸವರಾಜ ಬಳ್ಳಾರಿ ಅವರಿಗೆ ಚುನಾವಣಾ ಅಧಿಕಾರಿ ಪ್ರಮಾಣಪತ್ರ ನೀಡಿದರು.
ನೂತನ ಅಧ್ಯಕ್ಷ ಬಸವರಾಜ ಬಳ್ಳಾರಿ ಮಾತನಾಡಿ, ‘ಈ ಗೆಲವಿಗೆ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಮತ್ತು ಪದಾಧಿಕಾರಿಗಳು ಕಾರಣ’ ಎಂದು ಕೃತಜ್ಞತೆ ಸಲ್ಲಿಸಿದರು.
‘ನನ್ನ ಅವಧಿಯಲ್ಲಿ ನೌಕರರ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.
ನಂತರ ಅವರ ಅಭಿಮಾನಿಗಳು ಹಾಗೂ ನೌಕರರ ವರ್ಗ ಅವರಿಗೆ ಅಭಿನಂದನೆ ಸಲ್ಲಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.