ಶಿರಹಟ್ಟಿ: ತಾಲ್ಕೂಕಿನಾದ್ಯಂತ ಮಳೆಯಾರ್ಭಟಕ್ಕೆ ಜನ-ಜಾನುವಾರು ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಬೆಂಬಿಡದೆ ಮಳೆ ಸುರಿಯುತ್ತಿದೆ. ತುಂಗಭದ್ರಾ ನದಿ ಪಾತ್ರದ ಗ್ರಾಮಗಳ ಜನರು ಎಂದಿನಂತೆ ಭಯದಿಂದ ಜೀವನ ನಡೆಸುತ್ತಿದ್ದು, ತಹಶೀಲ್ದಾರ ಅನಿಲ ಬಡಿಗೇರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಕುರಿತು ಮಾತನಾಡಿದ ಅವರು, ತುಂಗಭದ್ರಾ ನದಿ ನೀರಿನ ಮಟ್ಟ ಹೆಚ್ಚುತಿದ್ದಂತೆ ಜನ-ಜಾನುವಾರುಗಳ ರಕ್ಷಣೆಗೆ ಈಗಾಗಲೇ ತಾಲೂಕು ಆಡಳಿತದ ವತಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಮತ್ತು ಕಸದ ವಾಹನದಲ್ಲಿ ಧ್ವನಿ ವರ್ಧಕ ಅಳವಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.
ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಸಾರ್ವಜನಿಕರು ಹಾಗೂ ಜಾನುವಾರುಗಳನ್ನು ನದಿಯ ದಂಡೆಯಡೆಗೆ ಕೊಂಡಯ್ಯೊದಂತೆ ಜನರನ್ನು ಎಚ್ಚರಿಸಲಾಗಿದೆ. ಅಲ್ಲದೇ ಅಗತ್ಯ ಬಿದ್ದರೆ ಕಾಳಜಿ ಕೇಂದ್ರಗಳನ್ನು ತೆರೆಯಲು ಆಯಾ ಗ್ರಾಮಗಳಲ್ಲಿ ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರವಾಹ ಎದುರಿಸಲು ತಾಲೂಕು ಆಡಳಿತ ಸರ್ವ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದರು.
ನದಿಗೆ ಹೆಚ್ಚಿನ ನೀರು ಹರಿಬಿಡುವುದರಿಂದ ತಾಲೂಕಿನ ಹೊಳೆಇಟಗಿ, ಸಾಸರವಾಡ, ತೊಳಲಿ ಹಾಗೂ ಕಲ್ಲಾಗನೂರ ಸೇರಿದಂತೆ ನದಿಪಾತ್ರದ ಗ್ರಾಮಗಳ ಕೃಷಿ ಭೂಮಿ ಪ್ರತಿ ವರ್ಷ ಈ ಸಮಸ್ಯೆ ಎದುರಿಸಬೇಕಾಗಿದೆ. ಮಳೆಗೆ ಪ್ರವಾಹ ಬಂದಾಗಲು ತಾಲೂಕಿನ ತುಂಗಭದ್ರಾ ನದಿ ದಂಡೆಯ ಗ್ರಾಮಗಳ ರೈತರ ಕೃಷಿ ಭೂಮಿ ನದಿ ನೀರಿಗೆ ತುತ್ತಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ದುಸ್ಥಿತಿ ಎದುರಿಸುತ್ತಿದ್ದಾರೆ. ಅದಕ್ಕೆ ಸರ್ಕಾರದಿಂದ ಶಾಶ್ವತ ಪರಿಹಾರ ಕಂಡುಕೊಂಡು ಪ್ರವಾಹದ ನೀರಿಗೆ ರೈತರ ಫಸಲು ಬಲಿಯಾಗುವದನ್ನು ತಪ್ಪಿಸಬೇಕು ಎನ್ನುವುದು ಈ ಭಾಗದ ರೈತರ ಕಾಯಂ ನಿವೇದನೆ.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಸವರಾಜ ಕಾತರಾಳ, ಗ್ರಾಮ ಲೆಕ್ಕಾಧಿಕಾರಿ ಶರಣು ಮೈನಾಳ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.