ಶಿರಹಟ್ಟಿ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗೆ ಮಾಹಿತಿ ನೀಡುವ ಅಧಿಕಾರಿಗಳ ಅನಧಿಕೃತ ಗೈರಿನಿಂದಾಗಿ ಸಾಮಾನ್ಯ ಸಭೆಯನ್ನು ಮುಂದೂಡಿದ ಘಟನೆ ಮಂಗಳವಾರ ಜರುಗಿತು.
ಸ್ಥಳೀಯ ಪಟ್ಟಣ ಪಂಚಾಯಿತಿಯ ಹಳೇ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಬೇಕಾದ ಕಂದಾಯ ನಿರೀಕ್ಷಕ ಹಾಗೂ ಇತರೆ ಸಿಬ್ಬಂದಿ ಗೈರಾಗಿದ್ದಾರೆ. ರಜೆಯ ಪರವಾನಗಿ ಪಡೆಯದೇ, ಅಧಿಕಾರಿಗಳ ಹಾಗೂ ಅಡಳಿತ ಮಂಡಳಿಯ ದೂರವಾಣಿ ಕರೆಗೆ ಕಂದಾಯ ನಿರೀಕ್ಷಕರು ಸ್ಪಂದಿಸದ ಕಾರಣ ಸಭೆ ಮುಂದೂಡಲಾಯಿತು.
ಸರ್ವಾಧಿಕಾರದ ಧೋರಣೆ– ಆರೋಪ: ಸಭೆಯ ಮುಂದೂಡಿಕೆಯ ನಂತರ ಮಾತನಾಡಿದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಚೇರ್ಮನ್ ಹೊನ್ನಪ್ಪ ಶಿರಹಟ್ಟಿ, ‘ಆಡಳಿತ ಮಂಡಳಿ ಅನುಮೋದನೆ ಇಲ್ಲದೆ ನೂತನ ಲೇಔಟ್ಗಳ ಉತಾರ ಪೂರೈಕೆ ಮಾಡುತ್ತಿರುವ ಮುಖ್ಯಾಧಿಕಾರಿ ಸರ್ಕಾರದ ಯಾವುದೇ ನಿಯಮ ಪಾಲಿಸದೇ ತಮಗೆ ಇಷ್ಟ ಬಂದಂತೆ ನಿರ್ಣಯ ಕೈಗೊಳ್ಳುತ್ತಿದ್ದು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಪಂಚಾಯಿತಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಸದಸ್ಯರ ಯಾವ ಮಾತನ್ನೂ ಆಲಿಸದೆ ತಮಗೆ ಇಷ್ಟ ಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಭಿವೃದ್ಧಿ ಮಾಡದ ಕನಕವಾಡ ಲೇಔಟ್ನ 32 ಉತಾರಗಳನ್ನು ಈಗಾಗಲೇ ಪೂರೈಕೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಲೇಔಟ್ಗಳು ಬರುತ್ತವೆ ಎಂಬ ಕನಿಷ್ಠ ಜ್ಞಾನ ಇಲ್ಲದ ಎಂಜಿನಿಯರ್ ಕಾಟೇವಾಲೆ ಅವರು ತಮಗೆ ತಿಳಿದ ದಿನ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಅವರ ರಿಪೋರ್ಟ್ (ವರದಿ) ಹಾಗೂ ಸಹಿ ಇಲ್ಲದೆ ಉತಾರ ಪೂರೈಕೆ ಮಾಡಿದ್ದಾರೆ ಎಂದು ಅವರೇ ಲಿಖಿತರೂಪದ ಮನವಿ ಸಲ್ಲಿಸಿದ್ದಾರೆ. ಪೂರೈಕೆಯಾದ ಯಾವ ಉತಾರಗಳಿಗೂ ಕಂದಾಯ ನಿರೀಕ್ಷಕರ ಕಡತ ಇಲ್ಲ. ಪಂಚಾಯಿತಿಯಲ್ಲಿ ಕಂದಾಯ ನಿರೀಕ್ಷಕರ ಹಾಗೂ ಎಂಜಿನಿಯರ್ ಲಾಗಿನ್ಗಳನ್ನು ಸ್ವತಃ ಮುಖ್ಯಾಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಸದಸ್ಯರಾದ ಮಂಜುನಾಥ ಘಂಟಿ, ಅಲ್ಲಾಭಕ್ಷಿ ನಗಾರಿ, ಪರಮೇಶ ಪರಬ, ಹಸರತಲಿ ಢಾಲಾಯತ್, ದೀಪು ಕಪ್ಪತ್ತನವರ, ಫಕೀರೇಶ ರಟ್ಟಿಹಳ್ಳಿ, ಸೋಮನಗೌಡ ಮರಿಗೌಡ, ದೇವಕ್ಕ ಕಲಾದಗಿ ಹಾಗೂ ಸಿಬ್ಬಂದಿ ಇದ್ದರು.
ಹಿಂದಿನ ಮುಖ್ಯಾಧಿಕಾರಿಗಳು ನಿಯಮಾನುಸಾರ ಅನುಮೋದನೆ ನೀಡಿರುವ ಉತಾರಗಳನ್ನು ಸಾರ್ವಜನಿಕರಿಗೆ ಪೂರೈಸಲಾಗಿದೆಸವಿತಾ ತಾಂಬ್ರೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.