ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ತಡರಾತ್ರಿ ರಭಸವಾಗಿ ಮಳೆ ಸುರಿದಿದೆ. ಮಳೆ ರೈತರಲ್ಲಿ ಸಂತಸ ಮೂಡಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ.
ಭಾರಿ ಮಳೆಯಿಂದ ಕಿರು ಹಳ್ಳಗಳು, ಜಮೀನುಗಳ ಓಣಿ ದಾರಿಗಳಲ್ಲಿ ನೀರು ತುಂಬಿ ಹರಿಯಿತು. ಚರಂಡಿಗಳು ಉಕ್ಕಿ ಹರಿದವು. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.
ಪಟ್ಟಣದಲ್ಲಿ ಊಟದ ಎಲೆ ತಯಾರಿಕಾ ಘಟಕಕ್ಕೆ ಮಳೆ ನೀರು ನುಗ್ಗಿ ಸಾವಿರಾರು ಎಲೆಗಳು ಹಾನಿಯಾಗಿವೆ. ಸಮೀಪದ ರಾಜೂರ ಗ್ರಾಮದ ಹಾಲಿನ ಕೇಂದ್ರದ ಹಿಂದಿನ ಮುಖ್ಯ ಚರಂಡಿ ತುಂಬಿ ಹರಿದಿದ್ದರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ.
ಜಮೀನುಗಳ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದ್ದ ನೀರು ಹರಿದು ಹೋಗಲು ರೈತರು ದಾರಿ ಮಾಡುತ್ತಿರುವುದು ಕಂಡುಬಂತು. ಹಲವು ದಿನಗಳಿಂದ ಕಣ್ಮರೆಯಾಗಿದ್ದ ಮಳೆ ಮತ್ತೆ ಸುರಿದಿದ್ದರಿಂದ ಗೋವಿನಜೋಳ ಬೆಳೆಗಳಿಗೆ ಮರುಜೀವ ನೀಡಿದೆ.
ಮುಂದುವರಿದ ಮಳೆ: ತಾಲ್ಲೂಕಿನಾದ್ಯಂತ ಮಂಗಳವಾರ ತಡರಾತ್ರಿ ಸುರಿದಿದ್ದ ಭಾರಿ ಮಳೆ ಬುಧವಾರ ಹಗಲಿನಲ್ಲಿ ಬಿಡುವು ನೀಡಿ ರಾತ್ರಿ ಮತ್ತೆ ಮುಂದುವರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.