ಪ್ರಜಾವಾಣಿ ವಾರ್ತೆ
ಗಜೇಂದ್ರಗಡ: ‘ಪ್ರಪಂಚದ ಎಲ್ಲಾ ಸಾಹಿತ್ಯಕ್ಕೂ ಜನಪದ ಸಾಹಿತ್ಯವೇ ಮೂಲವಾಗಿದ್ದು, ಜನಪದ ಸಾಹಿತ್ಯವು ಇಂದಿನ ಯುವ ಪೀಳಿಗೆಗೆ ಅವಶ್ಯವಾಗಿದೆ’ ಎಂದು ಮಹಾಂತೇಶ್ ನೆಲಗಣಿ ಹೇಳಿದರು.
ಸ್ಥಳೀಯ ಎಸ್. ಎಂ. ಭೂಮರಡ್ಡಿ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಉಡುಗೆ, ತೊಡುಗೆ, ಆಹಾರ ಕ್ರಮ, ರೀತಿ–ನೀತಿ, ಸಂಪ್ರದಾಯ, ಪರಂಪರೆ, ಹಾಡು, ಕಥೆ, ಕವನ ಇವೆಲ್ಲವುಗಳ ಸಮಾಗಮವಾಗಿರುವ ಜನಪದ ಸಾಹಿತ್ಯವು ಇಂದಿನ ಯುವ ಜನಾಂಗದಿಂದ ದೂರ ಸರಿಯುತ್ತಿರುವುದು ದುರಂತವೇ ಸರಿ’ ಎಂದರು.
‘ಕನ್ನಡ ನಾಡಿನ ವೈಶಿಷ್ಟ್ಯಪೂರ್ಣವಾದ ಜನಪದ ಸಾಹಿತ್ಯವನ್ನು ಅಂದಿನ ಆಂಗ್ಲರ ಗವರ್ನರ್ ಜನರಲ್ ಆಗಿದ್ದ ಜೆ.ಎಫ್ ಪ್ಲೀಟ್ ಅವರು ಸಂಗ್ರಹಿಸುವ ಮೊದಲ ಪ್ರಯತ್ನ ಮಾಡಿದರು. ಜನಪದ ಸಾಹಿತ್ಯವು ಜನರ ಮನಸ್ಸಿನ ನೋವು, ನಲಿವುಗಳ ಅನುಭವಗಳ ಸಮ್ಮಿಶ್ರಣವಾಗಿದ್ದು ಅವುಗಳಲ್ಲಿ ಜೀವನದ ನೀತಿಬೋಧನೆಗಳಿವೆ’ ಎಂದರು
ಅಧ್ಯಕ್ಷತೆ ವಹಿಸಿದ್ದ ಎಸ್.ಎನ್.ಶಿವರಡ್ಡಿ ಮಾತನಾಡಿ, ‘ಲಾವಣಿ ಅಂತಿ ಜೋಗುಳ ಸೋಬಾನೆ ಕುಟ್ಟುವ ಹಾಡು ಬೀಸುವ ಹಾಡು ಹೀಗೆ ಜನಪದ ಸಾಹಿತ್ಯದ ಆಗರವಾಗಿರುವ ಕನ್ನಡ ನಾಡಿನಲ್ಲಿ ಇಂದು ಜನಪದ ಸಾಹಿತ್ಯದ ತಿಳಿವಳಿಕೆಯಿಂದ ಯುವ ಪೀಳಿಗೆ ದೂರ ಸರಿಯುತ್ತಿದೆ. ನಮ್ಮ ಜನಪದ ಸಾಹಿತ್ಯವನ್ನು ಉಳಿಸುವ ಬೆಳೆಸುವ ಜವಾಬ್ದಾರಿಯಿಂದ ಯುವಜನರ ಮೇಲಿದೆ’ ಎಂದರು.
ಹಿರಿಯ ಉಪನ್ಯಾಸಕ ಬಿ.ವಿ.ಮುನವಳ್ಳಿ, ಎನ್ಎಸ್ಎಸ್ ಅಧಿಕಾರಿ ಎಸ್.ಕೆ.ಕಟ್ಟಿಮನಿ ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಕಾಲಕಾಲೇಶ್ವರ ವೃತ್ತದಿಂದ ಕುಂಭ ಮೆರವಣಿಗೆಯೊಂದಿಗೆ ಪ್ರಾರಂಭವಾದ ಜಾನಪದ ಉತ್ಸವ ಕಾರ್ಯಕ್ರಮವು ದುರ್ಗಾ ವೃತ್ತ, ವಿಜಯ ಮಹಾಂತೇಶ್ವರ ಮಠದ ಮೂಲಕ ಕಾಲೇಜಿನ ಸಭಾಭವನದವರೆಗೂ ನಡೆಯಿತು.
ಎಸ್.ಎಚ್.ಪವಾರ್, ಎಲ್.ಕೆ.ವದ್ನಾಳ್, ಎಲ್.ಕೆ.ಹಿರೇಮಠ, ಎಂ.ಎಲ್.ಕೋಟಿ, ಹರೀಶ್ ಮರ್ತುಜಾ, ಮಳಗಾವಿ, ಎಂ.ಬಿ.ಮುಲ್ಲಾ, ಮಹಾದೇವಿ ವಕ್ರಾಣಿ, ಕವಿತಾ ಬಂಡಿ, ಯು.ಎನ್.ತಿಮ್ಮನಗೌಡ, ಎಸ್.ವಿ.ಪತ್ತಾರ್, ಸುರೇಶ್, ಪ್ರತಾಪ್, ಸಂಗಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.