ADVERTISEMENT

ಜ.26ರಿಂದ ‘ಜನಸೇವಕ’ ಯೋಜನೆ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ

ಮನೆ ಬಾಗಿಲಿಗೆ ಸೇವೆಯಿಂದ ಕ್ರಾಂತಿಕಾರಕ ಬದಲಾವಣೆ– ಸಿಎಂ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 6:14 IST
Last Updated 7 ಡಿಸೆಂಬರ್ 2021, 6:14 IST
   

ಗದಗ: ‘ಜನವರಿ 26ರಿಂದ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ‘ಜನಸೇವಕ’ ಯೋಜನೆ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗದಗ ನಗರದಲ್ಲಿ ಸೋಮವಾರ ನಡೆದ ವಿಧಾನ ಪರಿಷತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ‘ಕಂದಾಯಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರ ತಹಶೀಲ್ದಾರ್‌ಗೇ ಇರಲಿದೆ. ಆದರೆ, ಈಗ ತಹಶೀಲ್ದಾರ್‌ ಕಚೇರಿಯಲ್ಲಿ ಕೊಡುತ್ತಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಹಣಿ ವಿತರಣೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುವ ಅವಕಾಶವನ್ನು ಗ್ರಾಮ ಪಂಚಾಯ್ತಿಗಳಿಗೆ ವರ್ಗಾಯಿಸಲಾಗುವುದು. ಇದಕ್ಕೆ ಅಗತ್ಯವಿರುವ ಡಿಟಿಟಲ್‌ ವ್ಯವಸ್ಥೆಯನ್ನು ಪಂಚಾಯ್ತಿಗಳಿಗೆ ಕಲ್ಪಿಸಲಾಗುವುದು. ಇದರಿಂದ ಕ್ರಾಂತಿಕಾರಕ ಬದಲಾವಣೆ ಆಗಲಿದೆ’ ಎಂದು ಹೇಳಿದರು.

ಯೋಜನೆ ಹಳ್ಳ ಹಿಡಿಸಿದ ಕಾಂಗ್ರೆಸ್:

ADVERTISEMENT

‘ಉತ್ತಮ ಫಲಿತಾಂಶ ನೀಡಿದ್ದ ‘ಸುವರ್ಣ ಗ್ರಾಮ ಯೋಜನೆ’ಯನ್ನು ಹಳ್ಳಹಿಡಿಸಿದ್ದು ಕಾಂಗ್ರೆಸ್‌ ಪಕ್ಷ. ಆ ಯೋಜನೆ ಮುಂದುವರಿದಿದ್ದರೆ ಗ್ರಾಮಗಳ ಚಿತ್ರಣವೇ ಬದಲಾಗುತ್ತಿತ್ತು. ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಮಾತಿನಲ್ಲೇ ಮಂಟಪ ಕಟ್ಟುತ್ತಾರೆ. ಭಾಷಣದಿಂದ ಜನರ ಹೊಟ್ಟೆ ತುಂಬುವುದಿಲ್ಲ. ಬಡವರಿಗೆ ಮನೆ ಕಟ್ಟಿಕೊಡುವುದಾಗಿ ಘೋಷಣೆ ಮಾಡಿದರು. ಆದರೆ, ಅದಕ್ಕಾಗಿ ನಯಾಪೈಸೆ ಎತ್ತಿಡಲಿಲ್ಲ’ ಎಂದು ಲೇವಡಿ ಮಾಡಿದರು.

‘ಅಮೃತ ವಸತಿ ಯೋಜನೆ ಅಡಿ 5 ಲಕ್ಷ ಮನೆಗಳನ್ನು ಮಂಜೂರಾತಿ ಮಾಡಲಾಗಿದೆ. ನಮ್ಮ ಸರ್ಕಾರದ ಅವಧಿ ಮುಗಿಯುವುದರೊಳಗೆ ಯೋಜನೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 7,500 ಸ್ತ್ರೀ ಶಕ್ತಿ ಸಂಘಕ್ಕೆ ತಲಾ ₹1 ಲಕ್ಷ ತೆಗೆದಿರಿಸಲಾಗಿದೆ. 75 ಸಾವಿರ ಯುವಕರಿಗೆ ಕೌಶಲಾಭಿವೃದ್ಧಿ ಮಾಡಿ ಅವರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.