ADVERTISEMENT

ಕಲಬರ್ಗಿ ಹತ್ಯೆ ತನಿಖೆ ಎಸ್‌ಐಟಿಗೆ ವಹಿಸಲು ಆಗ್ರಹ

ಗದುಗಿನ ಗಾಂಧಿ ವೃತ್ತದಲ್ಲಿ ತೋಂಟದಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 13:12 IST
Last Updated 30 ಆಗಸ್ಟ್ 2018, 13:12 IST
ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುವಂತೆ ಆಗ್ರಹಿಸಿ ಗುರುವಾರ ಗದುಗಿನ ಗಾಂಧಿ ವೃತ್ತದಲ್ಲಿ ಬಸವೇಶ್ವರ ಪದವಿ ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು
ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುವಂತೆ ಆಗ್ರಹಿಸಿ ಗುರುವಾರ ಗದುಗಿನ ಗಾಂಧಿ ವೃತ್ತದಲ್ಲಿ ಬಸವೇಶ್ವರ ಪದವಿ ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು   

ಗದಗ: ‘ಗೌರಿ ಮತ್ತು ಕಲಬುರ್ಗಿ ಹತ್ಯೆ ನಡುವೆ ಸಂಬಂಧ ಇದೆ. ಕಲಬುರ್ಗಿ ಹತ್ಯೆ ಪ್ರಕರಣವನ್ನೂ ಸಿಐಡಿ ಬದಲು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಬೇಕು’ಎಂದು ಒತ್ತಾಯಿಸಿ ಗೌರಿ, ಡಾ. ಕಲಬುರ್ಗಿ, ದಾಬೋಲ್ಕರ್‌, ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿ ಸದಸ್ಯರು ಗುರುವಾರ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

‘ಎಸ್‌ಐಟಿ ತನಿಖೆಯಿಂದ ಈ ನಾಲ್ಕೂ ಹತ್ಯೆಗಳಿಗೆ ಆಂತರಿಕವಾದ ಸಂಬಂಧ ಇದೆ ಎನ್ನುವುದು ಸ್ಪಷ್ಟವಾಗಿದೆ. ಗೌರಿ ಲಂಕೇಶ್ ಹತ್ಯೆ ಹಿಂದಿನ ಸಂಘಟನೆ ಹೆಸರನ್ನು ಅಧಿಕಾರಿಗಳು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು’ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳು, ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು.

ADVERTISEMENT

‘ಸಾಹಿತಿಗಳು, ವಿಚಾರವಾದಿಗಳ ಹತ್ಯೆ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಲ್ಲ. ಭಿನ್ನಮತ, ಭಿನ್ನ ಧ್ವನಿಯನ್ನು ಹತ್ತಿಕ್ಕುತ್ತಿರುವ ವ್ಯಕ್ತಿಗಳು ಮತ್ತು ಅವರ ಹಿಂದಿರುವ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ಎಂದು ಸ್ವಾಮೀಜಿ ಒತ್ತಾಯಿಸಿದರು.

‘ವ್ಯಕ್ತಿಯನ್ನು ಕೊಲ್ಲಬಹುದು, ವಿಚಾರವನ್ನಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ಯೆ ಮಾಡುತ್ತಿರುವ ಹಂತಕರಿಗೆ ಧಿಕ್ಕಾರ’ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಎಸ್.ಎಸ್. ಹರ್ಲಾಪುರ, ಬಸವರಾಜ ಸೂಳಿಭಾವಿ,ಡಾ. ಡಿ.ಬಿ. ಗವಾನಿ, ಎಸ್.ಎಸ್. ಪಟ್ಟಣಶೆಟ್ಟಿ ಶಂಕರಗೌಡ ಸಾತ್ಮಾರ, ಎ.ಬಿ. ಹಿರೇಮಠ, ಡಾ. ರಾಮಚಂದ್ರ ಹಂಸನೂರ, ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ ಇದ್ದರು. ದಲಿತ ಕಲಾ ಮಂಡಳಿ, ಲಿಂಗಾಯತ ಪ್ರಗತಿಶೀಲ ಸಂಘ, ಬಸವ ದಳ, ದಲಿತ ಸಂಘರ್ಷ ಸಮಿತಿ ಸದಸ್ಯರು, ಬಸವೇಶ್ವರ ಪದವಿ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.