ಮುಂಡರಗಿ: ಪಠ್ಯಕ್ರಮ ಪೂರ್ಣಗೊಳಿಸುವ ಧಾವಂತ, ಸೆಮಿಷ್ಟರ್ ಪದ್ಧತಿಯ ಒತ್ತಡ ಸೇರಿದಂತೆ ಶೈಕ್ಷಣಿಕ ಕಾರ್ಯಭಾರಗಳಿಂದ ಇಂದು ಬಹುತೇಕ ಶಿಕ್ಷಣ ಸಂಸ್ಥೆಗಳು ಪುಸ್ತಕ ಪ್ರಕಟಣೆಯಂತಹ ಸಾಹಸಗಳಿಂದ ದೂರ ಉಳಿಯುತ್ತಿವೆ. ಆದರೆ, ಮುಂಡರಗಿಯ ಅನ್ನದಾನೀಶ್ವರ ವಿದ್ಯಾ ಸಮಿತಿಯ ಕ.ರಾ.ಬೆಲ್ಲದ ಪದವಿ ಕಾಲೇಜು, ಕನ್ನಡ ಸಂಘ ರಚಿಸಿಕೊಂಡು ಪ್ರತಿ ವರ್ಷ ಪುಸ್ತಕ ಪ್ರಕಟಣೆ ಮಾಡಿಕೊಂಡು ಬಂದಿದೆ.
ರಾಜ್ಯದಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ನಂತರ, ಪುಸ್ತಕ ಪ್ರಕಟಣೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಯೂ ಈ ವಿದ್ಯಾಸಂಸ್ಥೆಯದ್ದು.
ಕಾಲೇಜಿನ ಕನ್ನಡ ಸಂಘಕ್ಕೆ ಈಗ 27ರ ಹರೆಯ. 1991ರಲ್ಲಿ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಅಂದಿನ ಪ್ರಾಚಾರ್ಯ ಎ.ಬಿ.ಹಿರೇಮಠ, ಕನ್ನಡ ಉಪನ್ಯಾಸಕರಾದ ಎಸ್.ಬಿ.ಕೆ.ಗೌಡರ, ಆರ್.ಎಲ್.ಪೊಲೀಸಪಾಟೀಲ, ದಿ.ಎನ್.ಎಫ್.ದ್ಯಾವಮಗೌಡರ ಹಾಗೂ ಸಿಬ್ಬಂದಿ ಜತೆಯಾಗಿ ಕನ್ನಡ ಸಂಘ ಹುಟ್ಟುಹಾಕಿದರು.
ಸಂಘದ ಆಶ್ರಯದಲ್ಲಿ ವರ್ಷದುದ್ದಕ್ಕೂ ಕನ್ನಡ ಭಾಷೆ ಬೆಳೆಸುವ ವಿಚಾರ ಸಂಕಿರಣ, ಉಪನ್ಯಾಸ, ಚರ್ಚಾಗೋಷ್ಠಿ ಹಮ್ಮಿಕೊಂಡು ಬರಲಾಗುತ್ತಿದೆ.
ಕಾಲೇಜಿನ ಪ್ರಾಚಾರ್ಯರಾದ ಎ.ಬಿ.ಹಿರೇಮಠ, ಎಸ್.ಬಿ.ಕೆ.ಗೌಡರ, ಡಾ.ಎಂ.,ಬಿ.ಬೆಳವಟಗಿಮಠ, ಡಾ.ವಿ.ಕೆ.ಕೊಳುರಮಠ, ಡಾ.ಬಿಜೆ.ಜವಳಿ, ಡಾ.ಡಿ.ಸಿ.ಮಠದ, ಉಪನ್ಯಾಸಕರಾದ ಎಂ.ಜಿ.ಗಚ್ಚಣ್ಣವರ, ಎಸ್.ಆರ್.ಬಸಾಪುರ, ಎಸ್.ಎಂ.ಕಮ್ಮಾರ, ಬಿ.ಎಫ್.ಈಟಿ ಮೊದಲಾದವರು ಕನ್ನಡ ಸಂಘಕ್ಕೆ ಹಾಗೂ ಪುಸ್ತಕ ಪ್ರಕಟಣೆಗೆ ಶ್ರಮಿಸಿದ್ದಾರೆ.
**
ಡಾ.ಅನ್ನದಾನೀಶ್ವರ ಸ್ವಾಮೀಜಿ ಹಾಗೂ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಕಾಲೇಜಿನ ಸರ್ವ ಸಿಬ್ಬಂದಿಯ ನೆರವಿನೊಂದಿಗೆ ನಿರಂತರವಾಗಿ ಪುಸ್ತಕ ಪ್ರಕಟಣೆ ಮಾಡಲಾಗುತ್ತಿದೆ.
–ಡಾ.ಡಿ.ಸಿ.ಮಠದ, ಪ್ರಾಚಾರ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.