ADVERTISEMENT

ಲಕ್ಕುಂಡಿ | ಭೋಗದ ಜೀವನ ತ್ಯಜಿಸಿ: ಪ್ರಕಾಶರಾವ್‌

ಯೋಗಿರಾಜರ ಆರಾಧನಾ ಮಹೋತ್ಸವ: ಗಣಪತಿ ಹೋಮ, ಪಾದುಕ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 5:41 IST
Last Updated 22 ನವೆಂಬರ್ 2022, 5:41 IST
ಲಕ್ಕುಂಡಿ ಯೋಗಿರಾಜರ ಶತಮಾನ ಆರಾಧನಾ ಮಹೋತ್ಸವ ಅಂಗವಾಗಿ ಗಣಪತಿ ಸಹಸ್ರ ಹೋಮ ನಡೆಯಿತು
ಲಕ್ಕುಂಡಿ ಯೋಗಿರಾಜರ ಶತಮಾನ ಆರಾಧನಾ ಮಹೋತ್ಸವ ಅಂಗವಾಗಿ ಗಣಪತಿ ಸಹಸ್ರ ಹೋಮ ನಡೆಯಿತು   

ಲಕ್ಕುಂಡಿ: ದಾರಿದ್ರ್ಯದ ಬದುಕಿನಿಂದ ಹೊರ ಬರಬೇಕಾದರೆ ಅತಿಯಾದ ಭೋಗದ ಜೀವನ ತ್ಯಜಿಸಿ ಇತಿ ಮಿತಿಯಾಗಿ ಬದುಕಬೇಕು. ಈ ದಿಸೆಯಲ್ಲಿ ಯೋಗ ಸಿದ್ಧಿಯನ್ನು ಪಡೆದುಕೊಂಡ ಯೋಗಿರಾಜ ಮಹಾರಾಜರ ಜೀವನ ಮಾರ್ಗವನ್ನು ಅಳವಡಿಸಿಕೊಂಡು ಮೋಕ್ಷ ಹೊಂದಬೇಕು ಎಂದು ವಿದ್ಯಾವಾಚಸ್ಪತಿ ಪ್ರಕಾಶರಾವ್‌ ಗುರೂಜೀ ಹೇಳಿದರು.

ಇಲ್ಲಿಯ ಯೋಗಿರಾಜ ಭಕ್ತ ಮಂಡಳಿ ಹಮ್ಮಿಕೊಂಡಿರುವ ಯೋಗಿರಾಜ ಮಹಾರಾಜರ ಶತಮಾನ ಆರಾಧನಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ‘ಈ ಜಗತ್ತಿಗೆ ಪ್ರಪ್ರಥಮವಾಗಿ ಯೋಗವನ್ನು ಪರಿಚಯಿಸಿದವರು ಯಾಜ್ಞವಲ್ಕ್ಯರು. ನಂತರ ಪತಂಜಲಿ ಮಹರ್ಷಿ, ಸ್ವಾತರಾಮ ಹಾಗೂ ಶ್ರೀಕೃಷ್ಣರು. ಇವರ ತತ್ವ, ಸಿದ್ಧಾಂತಗಳಿಂದ ಹಲವಾರು ಜನ ಸಾಧನೆ ಮಾಡಿ ಯೋಗಿಗಳಾಗಿದ್ದಾರೆ. ಈ ದಿಸೆಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಯೋಗ ಸಂಪ್ರದಾಯವನ್ನು ಯೋಗಿರಾಜರು ಅನುಸರಿಸಿ ಯೋಗದಲ್ಲಿ ಸಾಧಕರಾದರು. ಯೋಗ ಅಂತಿಮವಾಗಿ ಸಮಾಧಿ ಸ್ಥಿತಿಯಾಗಿದ್ದು, ಇದು ಬ್ರಹ್ಮಚರ್ಯದಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.

ವೇದ ಮೂರ್ತಿ ರತ್ನಾಕರ ಭಟ್ ಜೋಶಿ, ಭಕ್ತ ಮಂಡಳಿಯ ಅಧ್ಯಕ್ಷ ನಾಗರಾಜ ಕುಲಕರ್ಣಿ, ಉಪಾಧ್ಯಕ್ಷ ಆರ್.ಡಿ.ದೇಸಾಯಿ, ಕಾರ್ಯದರ್ಶಿ ಅಶೋಕ ಜೋಶಿ ಇದ್ದರು.

ADVERTISEMENT

ರತ್ನಾಕರ ಭಟ್ಟ ಜೋಶಿ ಅವರ ನೇತೃತ್ವದಲ್ಲಿ ನಡೆದ ಗಣಪತಿ ಸಹಸ್ರ ಮೋದಕ ಹೋಮದಲ್ಲಿ ಪಾವಗಡ ಪ್ರಕಾಶರಾವ್‌ ಗುರೂಜೀ ಭಾಗವಹಿಸಿದ್ದರು. ಶ್ರೀಗಳ ಪಾದುಕ ಸ್ಥಾಪನೆಯೊಂದಿಗೆ ವಿದ್ಯಾ ಶಂಕರ ದೇವರಿಗೆ ವಿಪ್ರರಿಂದ ರುದ್ರಾಭಿಷೇಕ ನೆರವೇರಿತು.

ಗುರುವಿನಹಳ್ಳಿಯ ವಿಶ್ವನಾಥ ಕುಲಕರ್ಣಿ ಅವರ ಕುಮಾರವ್ಯಾಸರ ರಚನೆಯ ಗಮಕ ವಾಚನ ಹಾಗೂ ರಾಣೆಬೆನ್ನೂರಿನ ವಿಜಯ ಕುಲಕರ್ಣಿ ಅವರ ಕೊಳಲು ವಾದನ ಮನರಂಜಿಸಿತು. ವೈಭವಿ ಜೋಶಿ ಪ್ರಾರ್ಥಿಸಿದರು. ದತ್ತಾತ್ರೇಯ ಜೋಶಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.