ಮುಂಡರಗಿ: ‘ಜೀವನಶೈಲಿಯ ಬದಲಾವಣೆಯಿಂದ ಸಾಕಷ್ಟು ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗಗಳ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತಿರುವುದು ಕುಟುಂಬಗಳಲ್ಲಿ ಆತಂಕ ಮೂಡಿಸಿದೆ’ ಎಂದು ಅನ್ನದಾನೀಶ್ವರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕು ಆಡಳಿತ, ಆಯುಷ್ಯ ಇಲಾಖೆ, ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಾರ್ಯಾಲಯ, ಅನ್ಮೋಲ ಯೋಗ ಕೇಂದ್ರ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಶುಕ್ರವಾರ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ 11ನೇ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯೋಗಕ್ಕೆ ವ್ಯಕ್ತಿಯ ಸಮಗ್ರ ಆರೋಗ್ಯ ಸುಧಾರಿಸುವ ಶಕ್ತಿಯಿದೆ. ಪತಂಜಲಿ ಮಹರ್ಷಿಯು ಜಗತ್ತಿಗೆ ಯೋಗವನ್ನು ಪರಿಚಯಿಸಿದರು. ಎಲ್ಲರೂ ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಬೇಕು’ ಎಂದರು.
ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮಂಜುನಾಥ ಅಳವುಂಡಿ ಮಾತನಾಡಿ, ‘ಸದೃಡ ಮನಸ್ಸು ಹಾಗೂ ಆರೋಗ್ಯಕ್ಕೆ ಯೋಗ ಸಹಕಾರಿ. ಸರ್ಕಾರವು ಯೋಗವನ್ನು ಜಗತ್ತಿನ ಪರಿಚಯಿಸಿದೆ’ ಎಂದರು.
ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಕಾರ್ಯಕರ್ತರು ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡಿದ್ದರು. ಅನ್ಮೋಲ ಯೋಗ ತರಬೇತಿ ಕೇಂದ್ರದ ನಿರ್ದೇಶಕಿ ಮಂಗಳಾ ಸಜ್ಜನರ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಹಿಮಾಲಯ ಯೋಗ ತರಬೇತಿ ಕೇಂದ್ರದ ಸಂಚಾಲಕಿ ಮಂಜುಳಾ ಇಟಗಿ ಸ್ವಾಗತಿಸಿದರು. ವೀಣಾ ಪಾಟೀಲ ನಿರೂಪಿಸಿದರು. ಸಚಿನ್ ಉಪ್ಪಾರ ವಂದಿಸಿದರು. ಬಿಇಒ ಎಚ್.ಎಂ. ಫಡ್ನೇಶಿ, ಮುಖಂಡರಾದ ಹೇಮಗೀರೀಶ ಹಾವಿನಾಳ, ನಾಗೇಶ ಹುಬ್ಬಳ್ಳಿ, ಬಿ.ಜಿ. ಜವಳಿ, ಮಂಜುನಾಥ ಇಟಗಿ, ಸಂತೋಷ ಹಿರೇಮಠ, ಜಗದೀಶ ಸೋನಿ, ರೇಖಾ ಅಳವಂಡಿ, ಚಂದ್ರಕಾಂತ ಇಟಗಿ, ರವಿ ಪಾಟೀಲ, ಮಂಜುನಾಥ ಮುಧೋಳ, ಅಶೋಕ ಹುಬ್ಬಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.