ADVERTISEMENT

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ

ಗದಗ ಜಿಲ್ಲಾ ಕಾಂಗ್ರೆಸ್‌ ಸಮಿತಿ ತಾಕೀತು, ವಿವಿಧ ಕಾಮಗಾರಿ ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 6:01 IST
Last Updated 6 ಜನವರಿ 2022, 6:01 IST
ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸಿದರು
ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸಿದರು   

ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸಿದ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಮನವಿ ಸಲ್ಲಿಸಿತು.

ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ ಹಾಗೂ ಮಾಜಿ ಸಚಿವ ಬಿ.ಆರ್.ಯಾವಗಲ್ಲ ಅವರ ನೇತೃತ್ವದಲ್ಲಿ ಹೊಳೆಆಲೂರಿಂದ ಗದಗ ನಗರದವರೆಗೆ ಪಾದಯಾತ್ರೆ ನಡೆಸಿದ ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಳಿಕ ಮನವಿ ಸಲ್ಲಿಸಿದರು.

ರಾಜಕೀಯ ಕೇವಲ ಚುನಾವಣೆಯಲ್ಲಿ ಇರಬೇಕೇ ವಿನಹ ಅಭಿವೃದ್ಧಿ ವಿಷಯದಲ್ಲಲ್ಲ. ಪಕ್ಷ, ಜಾತಿ, ಮತ ನೋಡದೇ ಹಿಂದಿನ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಜಾರಿಗೊಳಿಸಿದ ಹಲವು ಜನಪರ ಯೋಜನೆಗಳು ನಾಲ್ಕು ವರ್ಷವಾದರೂ ಆರಂಭಗೊಂಡಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಮನವಿಯಲ್ಲಿ ದೂರಿದ್ದಾರೆ.

ADVERTISEMENT

ನರಗುಂದ ಮತಕ್ಷೇತ್ರ ನಾಲ್ಕು ವರ್ಷಗಳಿಂದ ಅಭಿವೃದ್ದಿ ಕೆಲಸಗಳಿಂದ ವಂಚಿತವಾಗಿದೆ. ಕೇಂದ್ರ ಮತ್ತು ರಾಜ್ಯ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರವಿದ್ದರೂ ಈ ಭಾಗದ ರೈತರ ಬಹುದಿನಗಳ ಕನಸಿನ ಯೋಜನೆ ಮಹಾದಾಯಿ ಜಾರಿಗೊಳ್ಳುತ್ತಿಲ್ಲ ಎಂದು ಆಪಾದನೆ ಮಾಡಿದ್ದಾರೆ.

ರೈತ ಸಮುದಾಯದ ಬೇಡಿಕೆಯಾದ ಮಹಾದಾಯಿ ನದಿ ಜೋಡಣೆ, ನರಗುಂದ ಪಟ್ಟಣದ ಬಡವರಿಗಾಗಿ ₹110 ಕೋಟಿ ವೆಚ್ಚದಲ್ಲಿ 2 ಸಾವಿರ ಮನೆಗಳ ನಿರ್ಮಾಣದ ಆಶ್ರಯ ಯೋಜನೆ ಅನುಷ್ಟಾನ ಹಾಗೂ ಬಿ.ಆರ್‌.ಯಾವಗಲ್‍ ಅವರು ಶಾಸಕರಿದ್ದಾಗ ನರಗುಂದ ಪಟ್ಟಣಕ್ಕೆ ಮಂಜೂರಾತಿ ನೀಡಿದ್ದ ₹58 ಕೋಟಿ ವೆಚ್ಚದ ಎಂಜಿನಿಯರಿಂಗ್ ಕಟ್ಟಡ ಕೆಲಸ ಶೀಘ್ರ ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಡಿಸಿಸಿ ಅಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ, ರಾಜು ಕಲಾಲ, ಬಸವರಾಜ ಕಡೇಮನಿ, ಉಮರ್‌ ಫಾರೂಕ್ ಹುಬ್ಬಳ್ಳಿ ಸೇರಿದಂತೆ ನೂರಾರು ಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.