ನರಗುಂದ: ಪಟ್ಟಣದ ಜ್ಞಾನ ಮುದ್ರಾ ಪಬ್ಲಿಕ್ ಶಾಲಾ ಆವರಣದಲ್ಲಿ ಅಪರೂಪದ ಒಗ್ಡೆನಿಯಾ ಪ್ರಭೇದದ ಜೇಡ ಪತ್ತೆಯಾಗಿರುವ ಬಗ್ಗೆ ಜೀವ ವೈವಿಧ್ಯ ವಿಜ್ಞಾನಿ ಮಂಜುನಾಥ ನಾಯಕ ಬುಧವಾರ ತಿಳಿಸಿದರು.
‘ಸಾಲ್ಟಿಸಿಡೆ ಕುಟುಂಬದ ಒಗ್ಡೆನಿಯಾ ಪ್ರಭೇದದ ಈ ಜೇಡವು ರೂಪದಲ್ಲಿ ಇರುವೆಯನ್ನು ಹೋಲುತ್ತದೆ. ಇದನ್ನು ಅನುಕರಣಿಜೇಡ ಅಥವಾ ಆ್ಯಂಟ್ ಮಿಮಿಕ್ ಎಂದು ಕರೆಯುತ್ತಾರೆ. ಗಾತ್ರವು 9 ರಿಂದ 9.5 ಮಿ.ಮೀ ಇರುತ್ತದೆ. ಜೀವಿಗಳ ವಿಕಸನಕ್ಕನುಗುಣವಾಗಿ ಪರ ಭಕ್ಷಕಗಳಿಂದ ರಕ್ಷಣೆ ಪಡೆಯಲು ಈ ಜೇಡಗಳು ನಡವಳಿಕೆ ಮತ್ತು ದೈಹಿಕ ರೂಪಗಳಲ್ಲಿ ಇರುವೆಯನ್ನು ಅನುಕರಣೆ ಮಾಡಲು ಸಾಧ್ಯವಾಗುವ ರಚನೆಯನ್ನು ಹೊಂದಿವೆ’ ಎಂದು ಅವರು ತಿಳಿಸಿದರು.
‘ಇರುವೆ ಅನುಕರಣೆ ಜೇಡಗಳು ‘ಮಿಥ್ಯ-ಸೊಂಟ’ದ ರಚನೆ ಹೊಂದಿದ್ದು ಇರುವೆಗಳ ಅಂಕು–ಡೊಂಕು ಚಲನೆಯನ್ನು ಅಳವಡಿಸಿಕೊಂಡಿವೆ. ಇರುವೆಗಳನ್ನು ತಿನ್ನಲು ಮತ್ತು ಇರುವೆಗಳಿಗೆ ಆಹಾರವಾಗದಂತೆ ಈ ಜಾತಿಯ ಜೇಡಗಳಿಗೆ ಜೀವ–ವಿಕಾಸದ ಹಂತದಲ್ಲಿಯೇ ಪ್ರಕೃತಿ ದತ್ತ ರಕ್ಷಣೆ ಒದಗಿಬಂದಿರುತ್ತದೆ’ ಎಂದು ತಿಳಿಸಿದ್ದಾರೆ.
ಈವರೆಗೆ ಕರ್ನಾಟಕದಲ್ಲಿ ಎಲ್ಲಿಯೂ ಈ ಪ್ರಭೇದದ ಜೇಡ ದಾಖಲಾಗಿಲ್ಲ. ಈ ಜೇಡಗಳ ಅಧ್ಯಯನವಾಗಬೇಕಿದೆ. ಜೇಡಗಳು ಬೆಳೆಗಳಿಗೆ ಮಾರಕವಾದ ಕೀಟಗಳನ್ನು ಭಕ್ಷಿಸಿ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಸಂರಕ್ಷಣೆ ಅವಶ್ಯವಾಗಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.