ಮುಂಡರಗಿ: '70ರ ದಶಕದಲ್ಲಿ ವಿದೇಶಿಯರಿಂದ ಹಾವಾಡಿಗರ ದೇಶವೆಂದು ಕರೆಯಿಸಿಕೊಂಡಿದ್ದ ಭಾರತ ದೇಶ ಇಂದು ಜಗತ್ತಿನ ಅಭಿವೃದ್ಧಿಶೀಲ ಹಾಗೂ ಮುಂಚೂಣಿ ರಾಷ್ಟ್ರವಾಗಿದ್ದು, ಭಾರತೀಯರು ಇಂದು ಜಗತ್ತನ್ನು ಆಳುತ್ತಿದ್ದಾರೆ' ಎಂದು ಗದುಗಿನ ಕೆ.ಎಸ್.ಎಸ್. ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಿ.ಬಿ.ಗವಾನಿ ತಿಳಿಸಿದರು.
ಪಟ್ಟಣದ ಕ.ರಾ.ಬೆಲ್ಲದ ಪದವಿ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ಅದ್ಯಯನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಸ್ತುತ ಶೈಕ್ಷಣಿಕ ವರ್ಷದ ಪಠ್ಯೇತರ ಚರುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಸುಧೀರ್ಘ ಇತಿಹಾಸವಿದ್ದು, ಅದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವೆಲ್ಲ ವಿಫಲರಾಗಿದ್ದೇವೆ. ಕನ್ನಡವವು ಒಂದು ಶಾಸ್ತ್ರಿಯ ಭಾಷೆಯಾಗಿದ್ದು, ಈ ಕುರಿತು ಯಾವ ಕೆಲಸಗಳೂ ಇವರೆಗೂ ನಡೆಯದಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ವಿಷಾದಿಸಿದರು.
ಸಾನಿಧ್ಯ ವಹಿಸಿದ್ದ ಅನ್ನದಾನೀಶ್ವರ ಮಹಾಸ್ವಾಮಿಜಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ತಪ್ಪಸ್ಸಿನಂತೆ ಕಳೆಯಬೇಕು. ಕೇವಲ ಪಠ್ಯ ಪುಸ್ತಕಗಳಿಗೆ ಸಿಮೀತರಾಗದೆ ಒಳ್ಳೆಯದನ್ನೆಲ್ಲ ಓದಿ ಪರಿಪೂರ್ಣರಾಗಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆರ್.ಎಲ್.ಪೊಲೀಸಪಾಟೀಲ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪಠ್ಯವನ್ನು ಬೋಧಿಸದೆ ಅವರ ಬದುಕಿಗೆ ಮಾರ್ಗದರ್ಶಿಯಾಗಬಲ್ಲ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ತಂದೆ, ತಾಯಿ ಹಾಗೂ ಗುರುವಿನ ಋಣ ತೀರಿಸಬೇಕು ಎಂದು ತಿಳಿಸಿದರು.
ಆಡಳಿತಾಧಿಕಾರಿ ಬಿ.ಜಿ.ಜವಳಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ನಿವೃತ್ತ ಪ್ರಾಚಾರ್ಯ ಡಿ.ಸಿ.ಮಠದ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಆರ್.ಎಚ್.ಜಂಣವಾರಿ ಸ್ವಾಗತಿಸಿದರು. ಪ್ರಾಚಾರ್ಯ ಸಂತೋಷ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮಂತಪ್ಪ.ಎಚ್. ವರದಿ ವಾಚಿಸಿದರು. ಲತಾ ಕಡ್ಡಿ ನಿರೂಪಿಸಿದರು. ಟಿ.ಬಿ.ದಂಡಿನ, ಮಮತಾ ಹಣಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.