ADVERTISEMENT

ಕಾಲಕಾಲೇಶ್ವರನ ಸನ್ನಿಧಿಯಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ವಿಶೇಷ ಪೂಜೆ

ದೇವಸ್ಥಾನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 3:23 IST
Last Updated 14 ಜನವರಿ 2021, 3:23 IST
ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ದೇವಸ್ಥಾನದ ವಿಹಂಗಮ ನೋಟ
ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ದೇವಸ್ಥಾನದ ವಿಹಂಗಮ ನೋಟ   

ಗಜೇಂದ್ರಗಡ: ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದಿರುವ ಸಮೀಪದ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ವಿಶೇಷ ಪೂಜೆಗಳು ನಡೆಯಲಿವೆ.

ದೇವಸ್ಥಾನದಲ್ಲಿ ಲಿಂಗರೂಪಿಯಾದ ಕಾಲಕಾಲೇಶ್ವರನಿಗೆ ಬೆಳಿಗ್ಗೆ ತೈಲಾಭ್ಯಂಗ, ಎಳ್ಳು, ಹರಿದ್ರಾ (ಅರಿಷಿಣ) ಮಿಶ್ರಿತ ಜಲದಿಂದ ಸ್ನಾನ, ನಂತರ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಅಲಂಕಾರ ಸೇವೆ ನಡೆಯುತ್ತದೆ. ನಂತರ ದರ್ಶನಕ್ಕೆ ಬರುವ ಭಕ್ತರಿಗೆ ಎಳ್ಳು, ಬೆಲ್ಲದ ನೈವೇದ್ಯ ವಿತರಿಸಲಾಗುತ್ತದೆ.

ಸಂಕ್ರಾಂತಿಯ ವಿಶೇಷ ಖಾದ್ಯ ಭರತ: ಸಂಕ್ರಾಂತಿ ದಿನ ಹಳ್ಳಿಗಳಲ್ಲಿ ಬೆಳಿಗ್ಗೆ ಪರಸ್ಪರ ಎಳ್ಳು, ಬೆಲ್ಲ ಹಂಚುವುದರ ಜೊತೆಗೆ ಮನೆ ಮನೆಗೆ ತೆರಳಿ ರೊಟ್ಟಿ-ಪಲ್ಯೆ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಹಬ್ಬದಲ್ಲಿ ‘ಭರತ’ ಎಂಬ ರುಚಿಕರ ಹಾಗೂ ವಿಶೇಷವಾದ ಖಾದ್ಯ ತಯಾರಿಸಲಾಗುತ್ತದೆ.

ADVERTISEMENT

ಕುದಿಸಿದ ಗೆಣಸು, ಗಜ್ಜರಿ, ಹುರಿದ ಹಸಿ ಕಡಲೆ ಕಾಳು, ಸುಟ್ಟ ಬದನೆಕಾಯಿ, ಉಪ್ಪು,ಖಾರ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಅರೆದು ಹಸಿ ಚಟ್ನಿಯಂತೆ ಭರತ ತಯಾರಿಸಲಾಗುತ್ತದೆ. ಸಜ್ಜೆ, ಜೋಳದ ಭರತ, ರೊಟ್ಟಿಯಲ್ಲಿ ಕಾಳು ಪಲ್ಯ, ವಿವಿಧ ಬಗೆಯ ಚಟ್ನಿ, ಹಸಿ ತರಕಾರಿಗಳನ್ನಿಟ್ಟು ರೊಟ್ಟಿಗಳನ್ನು ಮನೆ ಮನೆಗೆ ಹಂಚಲಾಗುತ್ತದೆ.

ಯುವಕರು ಗೆಳೆಯರೊಂದಿಗೆ ಸಮೀಪದ ಕಾಲಕಾಲೇಶ್ವರ, ಕಣವಿ ವೀರಭದ್ರೇಶ್ವರ, ಗವಿ ಸಂಗಪ್ಪ ಪುಣ್ಯ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಹೊಂಡಗಳಲ್ಲಿ ಸುತ್ತಲಿನ ಊರುಗಳ ಜನರು ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಪಡೆದು ಸಹ ಭೋಜನ ಸವಿಯುವ ಯೋಜನೆ ರೂಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.