ADVERTISEMENT

ಜನಪದ ನೃತ್ಯದಲ್ಲಿ ಮಿಂಚಿದ ರೋಣ ಶಿಕ್ಷಕರ ತಂಡ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 4:07 IST
Last Updated 29 ಅಕ್ಟೋಬರ್ 2021, 4:07 IST
ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಜನಪದ ನೃತ್ಯದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರೋಣ ತಾಲ್ಲೂಕಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು
ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಜನಪದ ನೃತ್ಯದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರೋಣ ತಾಲ್ಲೂಕಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು   

ರೋಣ: ಗ್ರಾಮೀಣ ಭಾಗದ ಜನರ ಜೀವನಾಡಿ ಆಗಿರುವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ರೋಣ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ತಂಡ ಶ್ರಮವಹಿಸುತ್ತಿದ್ದು, ಜನಪದ ನೃತ್ಯದ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ ಹೇಳಿದರು.

ದಾವಣಗೆರಿಯಲ್ಲಿ ಈಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಜನಪದ ನೃತ್ಯದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರೋಣ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ತಂಡಕ್ಕೆ ಪಟ್ಟಣದ ನೌಕರರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಜಾನಪದ ಎಲ್ಲಾ ಸಂಸ್ಕೃತಿಗಳ ಮೂಲ ಬೇರು ಹಾಗೂ ಗ್ರಾಮೀಣರ ಬದುಕಿನ ಪ್ರತಿಬಿಂಬವೂ ಹೌದು. ಇದರಲ್ಲಿ ನಿಜವಾದ ಹಳ್ಳಿಯ ಸೊಗಡಿದೆ ಆದ್ದರಿಂದ ಇನ್ನೂ ಜೀವಂತವಾಗಿದೆ ಎಂದರು. ಶಿಕ್ಷಕರು ಜಾನಪದ ಸಂಸ್ಕೃತಿಯ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಅದರಂತೆ ಯಾವುದೇ ಕಲಾ ಪ್ರಕಾರಗಳು ನಶಿಸಿ ಹೋಗದಂತೆ, ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ನೌಕರರ ಸಂಘದ ತಾಲ್ಲೂಕಾ ಘಟಕದ ಅಧ್ಯಕ್ಷ ಜಗದೀಶ ಮಡಿವಾಳರ ಮಾತನಾಡಿ, ಜನರ ಮಧ್ಯದಲ್ಲಿ ಸ್ವಾಭಾವಿಕವಾಗಿ ಹುಟ್ಟಿಕೊಂಡ ಜಾನಪದವು ಸಂಬಂಧಗಳನ್ನು ಗಟ್ಟಿಗೂಳಿಸುತ್ತದೆ. ಇಲ್ಲಿ ಭಾವನೆ, ಸ್ಪಂದನೆ ಹಾಗೂ ನೋವು ನಲಿವುಗಳ ಮಿಡಿತವನ್ನು ಎತ್ತಿ ತೋರಿಸುತ್ತದೆ ಎಂದರು.

ADVERTISEMENT

ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಮಜಿ ರಡ್ಡೇರ, ಬಿ.ಎಲ್. ಬ್ಯಾಳಿ, ಪಿ.ಪಿ. ಔದಕ್ಕನವರ, ವೈ.ಡಿ. ಗಾಣಗೇರ, ಎಸ್.ಜಿ. ದಾನಪ್ಪಗೌಡ್ರ, ವಿ. ಆರ್. ಸಂಗಳದ, ಎಸ್.ಬಿ. ಕ್ಯಾತನಗೌಡ್ರ, ಎಂ.ಬಿ. ಮಾದರ, ಬಿ.ಎಸ್. ಹಿರೇಮಠ, ಬಿ.ಎಸ್. ಮಾನೇದ, ರಾಜು ಸಿಕ್ಕಲಗಾರ, ಅಲ್ಲಾಸಾಬ ನದಾಫ್,ಪರುಶರಾಮ ಹರಿಜನ, ರಾಜು ಚಿಕ್ಕಲಗಾರ, ಕೆ.ಎ. ಹಾದಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.