ADVERTISEMENT

ಕೃಷಿಯಲ್ಲಿ ರೈತರಿಗೆ ಮಾದರಿಯಾದ ಸ್ವಾಮೀಜಿ!

ಆಧ್ಯಾತ್ಮದ ಜತೆಗೆ ಬೇಸಾಯವನ್ನು ಪ್ರೀತಿಸುತ್ತಿರುವ ಸಿದ್ದಲಿಂಗ ಶಿವಾಚಾರ್ಯರು

ಬಸವರಾಜ ಹಲಕುರ್ಕಿ
Published 17 ಡಿಸೆಂಬರ್ 2019, 19:32 IST
Last Updated 17 ಡಿಸೆಂಬರ್ 2019, 19:32 IST
ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ತಾವೇ  ಬೆಳೆದ ಕಬ್ಬು ಪ್ರದರ್ಶಿಸುತ್ತಿರುವುದು
ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ತಾವೇ  ಬೆಳೆದ ಕಬ್ಬು ಪ್ರದರ್ಶಿಸುತ್ತಿರುವುದು   

ನರಗುಂದ: 'ಮಠ, ಸ್ವಾಮೀಜಿಗಳು ಎಂದಾಕ್ಷಣ ಅಧ್ಯಾತ್ಮ, ಪ್ರವಚನ ಮತ್ತು ದಾಸೋಹನೆನಪಿಗೆ ಬರುತ್ತದೆ. ಆದರೆ, ನರಗುಂದದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಇದರ ಜತೆಗೆ ಸಾವಯವ ಕೃಷಿಯ ಮೂಲಕವೂ ಗಮನ ಸೆಳೆಯುತ್ತಾರೆ.

ಅಧ್ಯಾತ್ಮಕ್ಕಿಂತಹೆಚ್ಚಿನ ಸಮಯವನ್ನು ಕೃಷಿಗೆ ಮೀಸಲಿಟ್ಟಿರುವ ಸ್ವಾಮೀಜಿ, ಜಮೀನಿನಲ್ಲಿ ಬೆವರು ಹರಿಸಿ ದುಡಿಯುವ ಮೂಲಕ ಕಾಯಕ ತತ್ವವನ್ನು ನಿಜ ಅರ್ಥದಲ್ಲಿ ಜಾರಿಗೆ ತಂದಿದ್ದಾರೆ. ಈ ಮೂಲಕ ರೈತರಿಗೆ ಹಾಗೂ ಇತರೆ ಮಠಾಧೀಶರಿಗೂ ಮಾದರಿಯಾಗಿದ್ದಾರೆ.

ಪಂಚಗ್ರಹ ಗುಡ್ಡದ ಹಿರೇಮಠವು ಮೊದಲಿನಿಂದಲೂ ಕೃಷಿ ಭೂಮಿಯನ್ನು ಹೊಂದಿತ್ತು. ನೂತನ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದ ಯುವ ಸ್ವಾಮೀಜಿ ಸಿದ್ದಲಿಂಗ ಶಿವಾಚಾರ್ಯರು, ಎಲ್ಲ ಜಮೀನನ್ನು ತಾವೇ ಪರಭಾರೆ ವಹಿಸಿ ಕೃಷಿ ಕಾಯಕದಲ್ಲಿ ತೊಡಗುವ ಮೂಲಕ ಹೊಸ ಪರಂಪರೆಗೆ ಮೇಲ್ಪಂಕ್ತಿ ಹಾಕಿದ್ದಾರೆ. ಬೆಳಗಿನ ಪೂಜೆ ಮುಗಿಸಿಕೊಂಡು ಹೊಲಕ್ಕೆ ಹೋಗುವ ಸ್ವಾಮೀಜಿ, ಮತ್ತೆ ಮಠಕ್ಕೆ ಮರಳುವುದು ಸೂರ್ಯಾಸ್ತವಾದ ಮೇಲೆ.

ADVERTISEMENT

ಸ್ನಾತಕೋತ್ತರ ಪದವೀಧರರಾದ ಇವರು ಆರು ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಮೂರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. 40 ಎಕರೆ ಜಮೀನಿನಲ್ಲಿ 6 ಎಕರೆಯಲ್ಲಿ ಸಮಗ್ರ ಕೃಷಿಪದ್ಧತಿ ಅನುಸರಿಸಿದ್ದಾರೆ. 6 ಎಕರೆಯಲ್ಲಿ 2ಸಾವಿರ ಪೇರಲ, 1ಸಾವಿರ ಶ್ರೀಗಂಧ, 400 ಸಾಗವಾನಿ, 1ಸಾವಿರ ರಕ್ತಚಂದನ, 1ಸಾವಿರ ಮಹಾಗೋಣಿ, 250 ತೆಂಗು, ಮಾವು, ಹೆಬ್ಬೇವು, ನುಗ್ಗೆ, ಕರಿಬೇವು, ಸೀತಾಫಲ ಸಸಿಗಳನ್ನು ಬೆಳೆಸಿದ್ದಾರೆ. ಎಲ್ಲದರಿಂದಲೂ ಲಾಭ ಪಡೆಯುತ್ತಿದ್ದಾರೆ. ಉಳಿದ ಜಮೀನಿನಲ್ಲಿ ಕಬ್ಬು, ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

2 ಸಾವಿರ ಪೇರಲ ಗಿಡಗಳಿಂದ ₹10 ಲಕ್ಷ ಆದಾಯ ಬರುತ್ತದೆ. ಇದರಲ್ಲಿ ಎಲ್ಲ ಖರ್ಚು ಕಳೆದು ₹6 ಲಕ್ಷ ಉಳಿತಾಯವಾಗುತ್ತದೆ ಎನ್ನುತ್ತಾರೆ ಸ್ವಾಮೀಜಿ. 5 ಕೊಳವೆ ಬಾವಿ ಹಾಗೂ ಕೃಷಿ ಹೊಂಡದಿಂದ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.