ನರಗುಂದ: ಕಳೆದ ವರ್ಷ ಮಲಪ್ರಭಾ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟ ಪರಿಣಾಮ ತಾಲ್ಲೂಕಿನ ವಾಸನದಲ್ಲಿ ಹಲವಾರು ಮನೆಗಳು ಬಿದ್ದಿವೆ. ಆದರೆ ಬಿದ್ದ ಮನೆಗಳು ಪುನರ್ ನಿರ್ಮಾಣಗೊಂಡಿಲ್ಲ. ಮನೆ ಬಿದ್ದವರಿಗೆ ಸರಿಯಾಗಿ ಪರಿಹಾರವೂ ದೊರೆತಿಲ್ಲ. ಇದರಿಂದ ಆಕ್ರೋಶಗೊಂಡ ಸಂತ್ರಸ್ತ ಮಹಿಳೆಯರು ಬೇಗನೇ ಮನೆ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, ನಮಗೆ ಸರಿಯಾದ ಪರಿಹಾರ ದೊರೆತಿಲ್ಲ. ಮನೆ ಬೀಳದವರಿಗೆ ಪರಿಹಾರ ದೊರೆತಿದೆ. ಆದ್ದರಿಂದ ಕೂಡಲೇ ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ತಗಡಿನ ಶೆಡ್ನ ವಾಸದಿಂದ ಮುಕ್ತಿಗೊಳಿಸಬೇಕು. ಈಗಾಗಲೇ ಹಲವಾರು ಸಲ ಗ್ರಾಮ ಪಂಚಾಯ್ತಿಗೆ, ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದ ಪಿಡಿಒ ಎಂ.ಎ.ವಾಲಿ ತಮ್ಮ ಸಮಸ್ಯೆಯನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಲಕ್ಷ್ಮವ್ವ ಬಾರಕೇರ, ಕಲ್ಲವ್ವ ಗಾಳಪ್ಪನವರ, ಪ್ರೇಮಾ ಗಾಳಪ್ಪನವರ, ಮಲ್ಲನಗೌಡ ಕೆಂಚನಗೌಡ್ರ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.