ರೋಣ: ತಾಲ್ಲೂಕಿನ ಸವಡಿ ಗ್ರಾಮದಿಂದ ಯರೇಸಿಗಮ್ಮ ದೇವಸ್ಥಾನಕ್ಕೆ ತೆರಳುವ ಮುಖ್ಯ ರಸ್ತೆಗೆ ಅಡ್ಡಲಾಗಿ ಕಂಟಿ ಬಸಪ್ಪನ ಹಳ್ಳ ಹರಿಯುತ್ತಿದ್ದು, ಸಮರ್ಪಕ ಸೇತುವೆ ಇಲ್ಲದ ಕಾರಣ ಜನರ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ.
ಯರೇಸಿಗಮ್ಮ ದೇವಸ್ಥಾನಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಎರಡು ಹಳ್ಳಗಳು ಹರಿಯುತ್ತಿದ್ದು ದೇವತಿ ಹಳ್ಳಕ್ಕೆ ಸೇತುವೆಯನ್ನು ಈಗಾಗಲೇ ನಿರ್ಮಿಸಲಾಗಿದೆ. ಆದರೆ, ಕಂಟಿ
ಬಸಪ್ಪನ ಹಳ್ಳಕ್ಕೆ ಸೇತುವೆ ನಿರ್ಮಾಣವಾಗಿಲ್ಲ. ಹಳ್ಳದ ರಸ್ತೆಯೂ ಸಹ ಸಂಪೂರ್ಣ ಹಾಳಾಗಿದೆ. ಮಳೆಗಾಲದ ಸಂದರ್ಭದಲ್ಲಿ ಜನರ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಈ ಭಾಗದಲ್ಲಿ ರೈತರ ಜಮೀನುಗಳಿದ್ದು ಮಳೆಗಾಲದ ಸಂದರ್ಭದಲ್ಲಿ ಹಳ್ಳ ತುಂಬಿ ಬಂದರೆ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತಿದೆ.
ಮನವಿಗೆ ಸ್ಪಂದಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು:
ಹಳ್ಳಕ್ಕೆ ಸಮರ್ಪಕ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿ ಜಮೀನುಗಳಿಗೆ ತೆರಳಲು ಹಾಗೂ ಪ್ರತಿ ತಿಂಗಳು ಅಮಾವಾಸ್ಯೆಯಂದು ಭಕ್ತರು ದೇವಸ್ಥಾನಕ್ಕೆ ತೆರಳಲು ಸಮಸ್ಯೆ ಉಂಟಾಗುತ್ತಿದೆ. ಸೇತುವೆ ನಿರ್ಮಾಣವಾದರೇ ಸುಗಮ ಸಂಚಾರಕ್ಕೆ ಉಪಯುಕ್ತವಾಗಲಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಮಳೆಗಾಲದಲ್ಲಿ ಹಳ್ಳ ತುಂಬಿ ಬಂದರೆ ಸಂಚಾರ ಮಾರ್ಗ ಸ್ಥಗಿತಗೊಳ್ಳಲಿದೆ. ಹೆಚ್ಚು ಮಳೆಯಾದಾಗ ಹಳ್ಳದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ದೇವಸ್ಥಾನಕ್ಕೆ ತೆರಳಲು ಸಹ ತೊಂದರೆ ಉಂಟಾಗುತ್ತಿದೆ.ಚನ್ನಮ್ಮಲ್ಲಪ್ಪ ಗದಗ ಸವಡಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.