ಹಾಸನ: ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಡವರು, ಕೂಲಿ ಕಾರ್ಮಿಕರಿಗೆ ವರದಾನವಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ನಗರದಲ್ಲಿ ಉದ್ಘಾಟನೆಯಾದ ಕ್ಯಾಂಟೀನ್ಗಳ ಎದುರು ಜನರು ಸಾಲಿನಲ್ಲಿ ನಿಂತು ಟೋಕನ್ ಪಡೆದು ತಿಂಡಿ, ಊಟ ಸೇವಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದ ವೇಳೆ ರಾಹುಲ್ ಗಾಂಧಿ ಉಪಾಹಾರ ಹಾಗೂ ಕಾಫಿ ಕುಡಿಯುವ ಮೂಲಕ ಕ್ಯಾಂಟೀನ್ಗೆ ಚಾಲನೆ ನೀಡಿದ್ದರು.
ಜಿಲ್ಲಾಸ್ಪತ್ರೆ ರಸ್ತೆ ಮತ್ತು ಸಂತೆಪೇಟೆ ವಸ್ತುಪ್ರದರ್ಶನ ಆವರಣದಲ್ಲಿ ನಿರ್ಮಿಸಿರುವ ಕ್ಯಾಂಟೀನ್ನತ್ತ
ಮುಂಜಾನೆಯಿಂದಲೇ ಕೂಲಿ ಮಾಡಿ ಬಂದವರು, ಆಟೊ ಚಾಲಕರು, ತರಕಾರಿ ವ್ಯಾಪಾರಿಗಳು ಕಣ್ಣು ಹಾಯಿಸುತ್ತಿದ್ದಾರೆ.
ಕಡಿಮೆ ಹಣಕ್ಕೆ ಶುಚಿ ಹಾಗೂ ಗುಣಮಟ್ಟದ ಆಹಾರ ನೀಡುತ್ತಿರುವ ಕಾರಣ ಜನರು ಮುಗಿಬೀಳುತ್ತಿದ್ದಾರೆ. ಅನ್ನ, ಸಾರು, ಮೊಸರನ್ನ ಊಟಕ್ಕೆ ನೀಡಲಾಗುತ್ತಿದೆ. ಉಪಹಾರದ ಟೋಕನ್ ಬೆಳಿಗ್ಗೆ 8 ಗಂಟೆಯಷ್ಟರಲ್ಲಿ ಖಾಲಿ ಆಗಿರುತ್ತದೆ.
‘ಕಡಿಮೆ ದರದಲ್ಲಿ ಒಳ್ಳೆಯ ಊಟ ನೀಡಲಾಗುತ್ತಿದೆ. ರಸ್ತೆಬದಿ ಹಣ್ಣು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೇನೆ. ಕ್ಯಾಂಟೀನ್ನಿಂದ ನನ್ನಂತಹ ಎಷ್ಟೋ ಬಡವರಿಗೆ ಅನುಕೂಲವಾಗಿದೆ. ಟೋಕನ್ ಪಡೆಯಲು ಬೆಳಿಗ್ಗೆ, ಮಧ್ಯಾಹ್ನ ಬೇಗ ಬರಬೇಕು. ತಡವಾದರೂ ಖಾಲಿಯಾಗಿರುತ್ತದೆ. ಟೋಕನ್ ಸಂಖ್ಯೆ ಹೆಚ್ಚಿಸಿದರೆಒಳ್ಳೆಯದು’ ಎನ್ನುತ್ತಾರೆ ವ್ಯಾಪಾರಿ ಲಕ್ಷ್ಮಮ್ಮ.
‘ಕ್ಯಾಂಟೀನ್ನಲ್ಲಿ ನಿತ್ಯ 500 ಜನರಿಗೆ ಉಪಾಹಾರ ಹಾಗೂ ಊಟ ನೀಡಲಾಗುತ್ತಿದೆ. ದೆಹಲಿಯ ಗುತ್ತಿಗೆದಾರರು ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದು, ಬಾಣಸಿಗರು ಅಲ್ಲಿಂದಲೇ ಬಂದಿದ್ದಾರೆ.
‘ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವ ಕಾರಣ ಊಟ ಬೇಗ ಖಾಲಿಯಾಗುತ್ತಿದೆ’ ಎಂದು ನಗರಸಭೆ ಪೌರಾಯುಕ್ತ ಬಿ.ಎ.ಪರಮೇಶ್ ಹೇಳಿದರು.
‘ನಿತ್ಯ ಒಂದು ಹೊತ್ತಿನ ಉಪಾಹಾರ, ಎರಡು ಹೊತ್ತಿನ ಊಟಕ್ಕೆ ₹ 57 ಖರ್ಚಾಗುತ್ತಿದ್ದು, ₹ 25 ಗಳನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆ. ಬಾಕಿ ₹ 32 ಗಳನ್ನು ಸರ್ಕಾರವೇ ಗುತ್ತಿಗೆದಾರರಿಗೆ ಪಾವತಿಸುತ್ತಿದೆ. ಚಿತ್ರಾನ್ನ, ಪಲಾವ್, ಇಡ್ಲಿ ಹಾಗೂ ಚಪಾತಿ ಊಟ ನೀಡಲಾಗುತ್ತಿದೆ. ಕ್ಯಾಂಟೀನ್ ಊಟ ಚೆನ್ನಾಗಿದೆ ಎಂದು ಜನರು ತಿಳಿಸಿದ್ದಾರೆ. ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅವರು ವಿವರಿಸಿದರು.
**
ಕ್ಯಾಂಟೀನ್ನಲ್ಲಿ ಶುಚಿ ಮತ್ತು ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡಲಾಗುತ್ತಿದೆ
– ಬಿ.ಎ.ಪರಮೇಶ್, ನಗರಸಭೆ ಆಯುಕ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.