ADVERTISEMENT

ಈ ಶಾಲೆಗೆ ಮೈದಾನವೇ ಇಲ್ಲ!

ಪ್ರಸನ್ನಕುಮಾರಸುರೆ
Published 22 ಫೆಬ್ರುವರಿ 2014, 6:11 IST
Last Updated 22 ಫೆಬ್ರುವರಿ 2014, 6:11 IST

ಬಾಣಾವರ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯ ದೃಷ್ಟಿಯಿಂದ ದೈಹಿಕ ಶಿಕ್ಷಣವನ್ನು ಕಡ್ಡಾಯ ವಿಷಯವನ್ನಾಗಿ ಸೇರ್ಪಡೆ ಗೊಳಿಸಲಾಗಿದೆ. ಆದರೆ, ಕೆಲ ವಸತಿ ಶಾಲೆಗಳಲ್ಲಿ ಮೈದಾನವೇ ಇಲ್ಲ, ಕ್ರೀಡೋಪಕರಣಗಳ ಲಭ್ಯತೆ ಮರೀಚಿಕೆ. ಇದು ದೈಹಿಕ ಮತ್ತು ಮಾನಸಿಕ ವಿಕಾಸ ಹಂತದಲ್ಲಿರುವ ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ಅಡಚಣೆ ಎನ್ನಬಹುದು.

ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಬಾಣಾವರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಿಕ್ಕಾರಹಳ್ಳಿ ಸಮೀಪ ನೂತನವಾಗಿ ಆಸ್ತಿತ್ವಕ್ಕೆ ಬಂದಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮೈದಾನ ಇಲ್ಲದೇ ಕ್ರೀಡಾ ಚಟುವಟಿಕೆಗೆ ಅಡ್ಡಿಯಾಗಿದೆ.

ಈ ಶಾಲೆಯಲ್ಲಿ ಪ್ರಸ್ತುತ 203 ವಿದ್ಯಾರ್ಥಿನಿಯರು 6ನೇ ತರಗತಿಯಿಂದ 10ನೇ ತರಗತಿಯವರೆಗೆ ಅಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿಯರ ದೈಹಿಕ ಚಟುವಟಿಕೆಗೆ ಪೂರಕವಾದ ಮೈದಾನವಾಗಲಿ ಕ್ರೀಡಾ ಉಪಕರಣ ವಾಗಲಿ ದೊರೆಯದೆ ಮಕ್ಕಳು ಕ್ರೀಡೆ ಯಿಂದ ವಂಚಿತ ರಾಗುತ್ತಿದ್ದಾರೆ. ಶಾಲೆ ಯಲ್ಲಿ ದೈಹಿಕ ಶಿಕ್ಷಣ  ಶಿಕ್ಷಕಿ ಇದ್ದರೂ,  ಪೂರಕ ವ್ಯವಸ್ಥೆ ಇಲ್ಲದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಸುಮಾರು 10 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಈ ಸುಸಜ್ಜಿತ ಶಾಲೆ ಉದ್ಘಾಟನೆಗೊಂಡು 7–8 ತಿಂಗಳಾಗಿವೆ. ಆದರೆ, ಶಾಲೆಯ ಕ್ರೀಡಾ ವಿಭಾಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಇರುವ ಮೈದಾನವೂ ಸ್ವಚ್ಛವಾಗಿಲ್ಲದಿರುವುದರಿಂದ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಂಡರೆ ಬಿದ್ದು ಗಾಯಗೊಳ್ಳುವುದು ನಿಶ್ಚಿತ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಆಟೋಟಗಳಿಗೆ ಅನುಕೂಲ ವಾಗುವಂತಹ ಕ್ರೀಡಾಂಗಣ ನಿರ್ಮಿಸ ಬೇಕು ಎಂಬುದು ಪೋಷಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.