ADVERTISEMENT

ಐಟಿಐ ಬಡವರ ಪಾಲಿನ ಎಂಜಿನಿಯರಿಂಗ್‌ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 12:13 IST
Last Updated 29 ಏಪ್ರಿಲ್ 2019, 12:13 IST

ಜಾವಗಲ್‌: ಕೈಗಾರಿಕಾ ಶಿಕ್ಷಣಕ್ಕೆ ಬೆಲೆ ಇಲ್ಲ ಎಂದು ಹಲವರು ಹೇಳುತ್ತಾರೆ. ಆದರೆ, ಇದಕ್ಕೆ ಎಂಜಿನಿಯರಿಂಗ್‌ ಪದವಿಗಿಂತಲೂ ಹೆಚ್ಚು ಬೆಲೆ ಇದೆ ಎಂದು ಅರಸೀಕೆರೆ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಪ್ರದೀಪ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀನಿಧಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಐಟಿಐ ತರಬೇತಿದಾರರಿಗೆ ಪದವಿ ಪ್ರದಾನ ಹಾಗೂ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದ ಅಭಿವೃದ್ಧಿಗೆ ಕೈಗಾರಿಕಾ ಸಂಸ್ಥೆಗಳು ಹೆಚ್ಚಾಗಿ ಪಾತ್ರ ನಿರ್ವಹಿಸುತ್ತಿದೆ. ಐಟಿಐ ಒಂದು ತರಹ ಬಡವರ ಪಾಲಿನ ಎಂಜಿನಿಯರಿಂಗ್‌ ಆಗಿದೆ ಎಂದರು. ಎಸ್‌ಎಸ್‌ಎಲ್‌ಸಿ ಪಾಸಾದ ನಂತರ 16 ರಿಂದ 40ವರ್ಷದ ವಯೋಮಿತಿಯ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್‌ ಮೆಕಾನಿಕ್‌, ಫಿಟ್ಟರ್‌, ಕೋಪ ( ಕಂಪ್ಯೂಟರ್‌ ಆಪರೇಟಿಂಗ್‌ ಅಂಡ್‌ ಪ್ರೋಸಸಿಂಗ್‌)I ಈ ವಿಷಯಗಳನ್ನು ಆಯ್ಕೆ ಮಾಡಿಕೊಳ್ಖಬಹುದಾಗಿದೆ ಎಂದು ತಿಳಿಸಿದರು.

ಕಾಲೇಜಿನ ಸ್ಥಾಪಕ ಜೆ.ಆರ್.ತಿಮ್ಮಶೆಟ್ಟಿ ಮಾತನಾಡಿ, ಐಟಿಐ ಮುಗಿದ ವಿದ್ಯಾರ್ಥಿಗಳಿಗೆ ನೇರವಾಗಿ ಎರಡನೇ ವರ್ಷದ ಎಂಜಿನಿಯರಿಂಗ್‌ ಅಥವಾ ಡಿಪ್ಲೊಮೊ ಪ್ರವೇಶ ಪಡೆಯಬಹುದು. ಅಥವಾ ಯಾವುದೇ ಪದವಿ ಕೋರ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ. ಕೆಲವರು ಐಟಿಐ ಯನ್ನು ಕೀಳಾಗಿ ನೊಡುತ್ತಿದ್ದಾರೆ. ಒಂದಲ್ಲ ಒಂದು ದಿನ ಐಟಿಐನ ಬೆಲೆ ಗೊತ್ತಾಗುತ್ತದೆ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಅರಸೀಕೆರೆ ಚಂದ್ರಶೇಖರ ಭಾರತಿ ಐಟಿಐ ಕಾಲೇಜಿನ ಪ್ರಾಂಶುಪಾಲ ಕೆ.ಆರ್‌.ಸುರೇಶ್‌, ಗಂಡಸಿ ಐಟಿಐ ಕಾಲೇಜಿನ ಪ್ರಾಂಶುಪಾಲ ರೇವಣ್ಣಗೌಡ, ಕಣಕಟ್ಟೆ ವಿದ್ಯಾರಣ್ಯ ಐಟಿಐ ಕಾಲೇಜಿನ ಪ್ರಾಂಶುಪಾಲ ಪುಟ್ಟರಂಗಪ್ಪ, ಜಾವಗಲ್‌ ಶ್ರೀನಿಧಿ ಐಟಿಐ ಕಾಲೇಜಿನ ಪ್ರಾಂಶುಪಾಲ ಬೇತನ್‌ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.