ಆಲೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆಗೆ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ಕಾರಣ ಎಂದು ಕಾಂಗ್ರೆಸ್ ಮುಖಂಡ ಹೊನ್ನವಳ್ಳಿ ಗಣೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೆ.ಹೊಸಕೋಟೆ ಹಾಗೂ ಕುಂದೂರು ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆ ದಾಂದಲೆಯಿಂದ ಬೆಳೆ ಹಾನಿಯನ್ನು ಈಚೆಗೆ ಪರಿಶೀಲಿಸಿ ಮಾತನಾಡಿದರು. ದೊಡ್ಡ ಬೆಟ್ಟ ಸುತ್ತಲ ಹಳ್ಳಿಗಳಾದ ಕಣಿವೆ ಬಸವನಹಳ್ಳಿ, ಅಡಿ ಬೈಲು ಕಾಣಿಗೆರೆ ವ್ಯಾಪ್ತಿಯಲ್ಲಿ ಆನೆ ದಾಂದಲೆ ಹೆಚ್ಚಿದೆ. ಅರಣ್ಯ ಇಲಾಖೆ ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು, ಬೆಳೆ ನಷ್ಟ ಪರಿಹಾರ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.
ಆನೆ ಕಾರಿಡಾರ್ ನಿರ್ಮಿಸಲು ಕೇಂದ್ರದ ಗಮನ ಸೆಳೆಯಲು ಪಕ್ಷಾತೀತ ಚರ್ಚೆ ನಡೆಯಬೇಕು. ಈ ಬಗ್ಗೆ ಗಮನಸೆಳೆಯಲು ಪ್ರತಿಭಟನೆ ನಡೆಸಲಾಗುವುದು ಎಂದರು.
ಅರಣ್ಯ ವಲಯಾಧಿಕಾರಿ ಪ್ರದೀಪ್, ಕಾಡಾನೆಗಳ ದಾಂದಲೆಯಿಂದ ಬೆಳೆ ಹಾನಿ ತಪ್ಪಿಸಲು ಪ್ರಯತ್ನ ನಡೆದಿದೆ. ಬೆಳೆನಷ್ಟ ಪರಿಹಾರ ನೀಡುವ ಕುರಿತು ಸ್ಥಳ ಪರಿಶೀಲನೆ ನಡೆಸಿ ತೀರ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ರೈತರ ನಡುವೆ ಕೆಲಹೊತ್ತು ವಾಗ್ವಾದ ನಡೆಯಿತು. ವನಪಾಲಕರಾದ ಜಯಪ್ರಕಾಶ್. ನಾಗಪ್ಪ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.