ADVERTISEMENT

ಕಾನೂನಿನ ಅರಿವು ಮೂಡಿಸಲು ಕರೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 8:05 IST
Last Updated 8 ಜನವರಿ 2011, 8:05 IST

ಹಾಸನ: ‘ವಕೀಲ ವೃತ್ತಿ ಗೌರವದ ಮತ್ತು ಅತ್ಯಂತ ಜವಾಬ್ದಾರಿಯ ವೃತ್ತಿಯಾಗಿದ್ದು ವಕೀಲರು ಗ್ರಾಮೀಣ ಭಾಗದ ಜನರಲ್ಲಿ ಕಾನೂನಿನ ಅರಿವು ಮೂಡಿಸಿ ಅವರ ಸಮಸ್ಯೆ ಬಗೆ ಹರಿಸಲು ಶ್ರಮಿಸಿಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ. ಸೋಮಶೇಖರ್ ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ವತಿಯಿಂದ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಸ್ವಯಂ ಪ್ರೇರಿತ ಕಾನೂನು ಸಹಾಯಕರಿಗಾಗಿ ಶುಕ್ರವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಅರಿವು ಇರುವುದಿಲ್ಲ, ಅವರಿಗೆ ಕಾನೂನಿನ ತಿಳಿವಳಿಕೆ ನೀಡುವ ಕಾರ್ಯವನ್ನು ವಕೀಲರು ಮಾಡಬೇಕಿದೆ. ನೊಂದ ಜನರ ನೋವನ್ನು ತಾಳ್ಮೆಯಿಂದ ಆಲಿಸಿ ಅವರಿಗೆ ಬರಬೇಕಾದ ಸೌಲಭ್ಯ ದೊರಕಿಸಿ ಕೊಡಬೇಕೆಂಬ ಉದ್ದೇಶ ವನ್ನು ವಕೀಲರು ಹೊಂದಿರಬೇಕು’ ಎಂದರು. ಮುಖ್ಯ ಅತಿಥಿಯಾಗಿದ್ದ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ. ರಮೇಶ್‌ರಾವ್, ‘ವಕೀಲರು ಹೆಚ್ಚಿನ ಜವಾಬ್ದಾರಿ ಹೊಂದಿದ್ದು ಸಮಾಜದಲ್ಲಿ ಅವರು ವಿಶೇಷ ವರ್ಗಕ್ಕೆ ಸೇರುತ್ತಾರೆ. ವಕೀಲರು ತಾವು ಗಳಿಸಿದ ಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಬಳಸಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು’ ಎಂದರು.

ಜಿಲ್ಲಾ ವಕೀಲರ ಸಂಘದ ಆಧ್ಯಕ್ಷ ಎಂ.ಎನ್. ಜಯರಾಂ, ವಕೀಲರಾದ ಎಂ.ಬಿ. ಗಿರಿಜಾಂಬಿಕಾ, ಬಿ.ಇ. ನಟೇಶ್, ಬಿ.ಸಿ. ಚಂದ್ರಶೇಖರ್, ಬಿ. ಚಂದ್ರಶೇಖರ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ  ಸುಶೀಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.