ADVERTISEMENT

ಕಾರು-ಲಾರಿ ಡಿಕ್ಕಿ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 5:20 IST
Last Updated 11 ಸೆಪ್ಟೆಂಬರ್ 2011, 5:20 IST

ಹಾಸನ: ಕಾರು ಮತ್ತು ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದು ಮೂರು ಮಂದಿ ಮೃತಪಟ್ಟು ಮೂವರು ಮಕ್ಕಳು ಸೇರಿದಂತೆ ಐದು ಮಂದಿ ಗಾಯಗೊಂಡಿರುವ ಘಟನೆ ಹಾಸನ-ಬೇಲೂರು ರಸ್ತೆಯ ಕಲ್ಕೆರೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಅಫ್ರೋಜ್ (35), ರುಬೀನಾ (27) ಹಾಗೂ ಫಕ್ರುದ್ದೀನ್ (35), ಮೇಹಕ್ (3) ಮೃತಪಟ್ಟ ದುರ್ದೈವಿಗಳು.
ಘಟನೆಯಲ್ಲಿ ರೇಶ್ಮಾ (27) ಮೆಹೆಕ್ (3), ತಮನ್ನಾ (6), ಫರ್ದೀನ್ (8) ಹಾಗೂ ಇಮ್ತಿಯಾಜ್ (25) ಎಂಬುವವರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮೂರು ವರ್ಷದ ಬಾಲಕಿ ಮೆಹೆಕ್ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಚಿಕ್ಕಮಗಳೂರಿನ ಶಂಕರಿಪುರಂ ಬಡಾವಣೆಯ ನಿವಾಸಿಗಳಾದ ಅಫ್ರೋಜ್, ಅವರ ಪತ್ನಿ ರುಬೀನಾ, ಜೆ.ಪಿ ನಗರದ ಫಕ್ರುದ್ದೀನ್ ಮತ್ತಿತರರು ಮಾರುತಿ ಓಮ್ನಿ ಕಾರಿನಲ್ಲಿ ಮೈಸೂರಿನತ್ತ ಹೋಗುತ್ತಿದ್ದರು. ಸಂಜೆ 6.30ರ ಸುಮಾರಿಗೆ ಕಲ್ಕೆರೆ ಬಳಿ ಮೈಸೂರು ಕಡೆಯಿಂದ ಬರುತ್ತಿರುವ ಲಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಅಪಘಾತದ ರಭಸಕ್ಕೆ ಮಾರುತಿ ಕಾರಿನ ಛಾವಣಿಯೇ ಕಿತ್ತು ಹೊರಗೆ ಬಂದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ ಮಗು ಮೆಹೆಕ್‌ಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್  ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.