ಅರಸೀಕೆರೆ: ಹಾಸನ ಜಿಲ್ಲೆಯಲ್ಲಿ ಹೇಮಾವತಿ ಮತ್ತು ಯಗಚಿ ಎರಡು ನದಿಗಳು ಹರಿದರೂ ಹಲವಾರು ದಶಕಗಳಿಂದ ತಾಲ್ಲೂಕಿನ ಜನತೆ ಫ್ಲೋರೈಡ್ಯುಕ್ತ ನೀರನ್ನೇ ಕುಡಿದು ಅನೇಕ ರೋಗ–ರುಜಿನುಗಳಿಗೆ ತುತ್ತಾಗಿ ನರಳುತ್ತಿದ್ದರು. ತಾಲ್ಲೂಕಿನ ಜನತೆಗೆ ಈಗ ಮುಕ್ತಿ ದೊರಕಿದ್ದು, ಹೇಮಾವತಿ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಕುಡಿಯುವ ಸುಯೋಗ ಒದಗಿ ಬಂದಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಸೋಮವಾರ ಹರ್ಷ ವ್ಯಕ್ತಪಡಿಸಿದರು.
ತಾಲ್ಲೂಕಿನ ಗಂಡಸಿ ಹ್ಯಾಂಡ್–ಪೋಸ್ಟ್ನಲ್ಲಿ ತಾಲ್ಲೂಕಿನ 477 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇಲೂರು ಶಾಸಕ ವೈ.ಎನ್ ರುದ್ರೇಶಗೌಡ ಮಾತನಾಡಿ, ಸರ್ಕಾರಗಳ ನೀರಾವರಿ ವ್ಯವಸ್ಥೆ ನೋಡಿದರೆ ನಗು ಬರುತ್ತದೆ. ಏಕೆಂದರೆ ನಮ್ಮ ಜಿಲ್ಲೆಯಲ್ಲಿ ಹರಿಯುವ ನದಿಗಳ ನೀರನ್ನು ನಾವು ಬಳಸಿಕೊಳ್ಳುವಂತಿಲ್ಲ. ಮಳೆಯ ಅಭಾವದಿಂದ ಕುಡಿಯುವ ನೀರಿಗಾಗಿ ಜನ– ಜಾನುವಾರು ಬವಣೆ ಪಡುವಂತಾಗಿದೆ ಎಂದರು.
ಚನ್ನರಾಯಪಟ್ಟಣದ ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿಚೌಡಯ್ಯ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ಮಾಜಿ ಅಧ್ಯಕ್ಷ ಎಂ. ಶಮೀವುಲ್ಲಾ, ಎ.ಪಿ.ಎಂ.ಸಿ ಅಧ್ಯಕ್ಷ ಅಜ್ಜಪ್ಪ, ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.