ADVERTISEMENT

ಕೆಆರ್‌ಎಸ್‌ಗೆ ಹೇಮಾವತಿ ನೀರು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಹಾಸನ: ಹೇಮಾವತಿ ಜಲಾಶಯದಿಂದ ಗುರುವಾರ ತಡರಾತ್ರಿ ಕೆಆರ್‌ಎಸ್ ಜಲಾಶಯಕ್ಕೆ 16 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವುದನ್ನು ವಿರೋಧಿಸಿ ನಗರ ಮತ್ತು ಹೇಮಾವತಿ ಜಲಾಶಯದ ಮುಂದೆಯೇ  ಶುಕ್ರವಾರ ಪ್ರತಿಭಟನೆ ನಡೆಯಿತು. ಇನ್ನು ಮುಂದೆಯೂ ನೀರನ್ನು ಹೊರಬಿಟ್ಟರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಶಾಸಕರಾದ ಎಚ್.ಎಸ್. ಪ್ರಕಾಶ್, ಎಚ್.ಕೆ. ಕುಮಾರಸ್ವಾಮಿ, ಮುಂತಾದವರ ನೇತೃತ್ವದಲ್ಲಿ ಶುಕ್ರವಾರ ಜೆಡಿಎಸ್ ಕಾರ್ಯಕರ್ತರು ಹಾಸನ ಹಾಗೂ ಗೊರೂರಿನಲ್ಲಿ ಪ್ರತಿಭಟನೆ ನಡೆಸಿದರು. `ಯಾರ ಆದೇಶವಿದ್ದರೂ ಹೇಮಾವತಿ ಜಲಾಶಯದಿಂದ ಇನ್ನು ನೀರು ಬಿಡಬಾರದು~ ಎಂದು ರೇವಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.

`ಜಲಾಶಯದಲ್ಲಿ ಕೇವಲ 22  ಟಿ.ಎಂ.ಸಿ ಅಡಿ ನೀರಿದೆ. ಅದರಲ್ಲಿ 8 ಟಿ.ಎಂ.ಸಿ ಅಡಿ ನಗರದ ಜನತೆಗೆ ಕುಡಿಯುವ ನೀರು ಸರಬರಾಜಿಗೆ ಬೇಕಾಗುತ್ತದೆ. ಹೇಮಾವತಿ ಜಲಾಶಯದ ನೀರನ್ನೇ ನಂಬಿಕೊಂಡು ಜಿಲ್ಲೆಯ ಸುಮಾರು 50 ಸಾವಿರ ಎಕರೆಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಈ ಬೆಳೆ ಉಳಿಸಿಕೊಳ್ಳಬೇಕಾದರೆ ಡಿಸೆಂಬರ್ ವರೆಗೆ ನಾಲೆಗಳಿಗೆ ನೀರು ಬಿಡಬೇಕಾಗುತ್ತದೆ. ಈಗಾಗಲೇ ಜಲಾಶಯ ಬರಿದು ಮಾಡಿದರೆ ನಮ್ಮ ರೈತರು ಮಣ್ಣು ತಿನ್ನಬೇಕಾಗುತ್ತದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಧ್ರುವ ವಿಜಯಸಿಂಗ್ ನೇತೃತ್ವದ ಸಮಿತಿ ಶನಿವಾರ ಹಾಸನಕ್ಕೆ ಭೇಟಿ ನೀಡಲಿದೆ. ಅವರಿಗೆ ಜಿಲ್ಲೆಯ ಸ್ಥಿತಿಗತಿ ವಿವರಿಸಿ ಮನವಿ ನೀಡುತ್ತೇವೆ.  ಸಂಜೆ (ಬಂದ್ ಬಳಿಕ) ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಗುವುದು. ಸೋಮವಾರದಿಂದ ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸಲಾಗುವುದು~ ಎಂದು ರೇವಣ್ಣ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.