ADVERTISEMENT

ಕೆಲಸ ಬಹಿಷ್ಕರಿಸಿ ಪೌರಕಾರ್ಮಿಕರ ಧರಣಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 8:35 IST
Last Updated 9 ಅಕ್ಟೋಬರ್ 2012, 8:35 IST

ಬೇಲೂರು: ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನೀರು ಸರಬರಾಜು ಮಾಡಲು ತೆರಳಿದ್ದ ಗುತ್ತಿಗೆ ನೌಕರ ಸುನೀಲ್ ಎಂಬಾತನ ಮೇಲೆ ಬಡಾ ವಣೆಯ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಿ ರುವುದನ್ನು ಖಂಡಿಸಿ ಪೌರಕಾರ್ಮಿಕರು ಸೋಮವಾರ ಕೆಲಸ ಬಹಿಷ್ಕರಿಸಿ ಪುರಸಭೆಯ ಮುಂದೆ ಧರಣಿ ನಡೆಸಿದರು.

ಗುತ್ತಿಗೆ ನೌಕರ ಸುನೀಲ್ ಶನಿವಾರ ಸಂಜೆ ವಿದ್ಯಾನಗರ ಬಡಾವಣೆಗೆ ನೀರು ಸರಬರಾಜು ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ಬಡಾವಣೆಯ ಕೆಲ ಕಿಡಿಗೇಡಿಗಳು ಅಡ್ಡಗಟ್ಟಿ ನೀರು ವಿತರಣೆಯ ವಿಚಾರಕ್ಕೆ ಸಂಬಂಧಿಸಿದಂತೆ ನಿಂದಿಸಿ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಪುರಸಭೆಯ ಪೌರ ಕಾರ್ಮಿಕರು, ಸಂಘಟನೆ ಗೌರವಾಧ್ಯಕ್ಷ ಕೆ.ಸುದರ್ಶನ್ ನೇತೃತ್ವದಲ್ಲಿ ದಿಢೀರ್ ಧರಣಿ ನಡೆಸಿದರಲ್ಲದೆ, ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಪೌರ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಸುದರ್ಶನ್ ಮಾತನಾಡಿ, ಪುರಸಭೆ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಮತ್ತು ಗುತ್ತಿಗೆ ಪೌರಕಾರ್ಮಿಕರಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ತಾರತಮ್ಯ ಮಾಡ ಲಾಗುತ್ತಿದೆ. ಸಮರ್ಪಕವಾಗಿ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಸ್ವಚ್ಛತೆಯ ಸಿಬ್ಬಂದಿಗಳಿಗೆ ಅಗತ್ಯವಾದ ಸುರಕ್ಷಾ ಸಲಕರಣೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಪುರಸಭಾಧ್ಯಕ್ಷ ತೊ.ಚ.ಅನಂತ ಸುಬ್ಬರಾಯ ಹಲ್ಲೆ ವಿಚಾರ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ನೌಕರನ ಆರೋಗ್ಯ ವಿಚಾರಿಸಿದರು. ಪೊಲೀಸರಿಗೆ ದೂರವಾಣಿ ಕರೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯ ಇತರೆ ಪುರಸಭೆಗಳಿಗೆ ಹೋಲಿಸಿದರೆ ಬೇಲೂರಿನಲ್ಲಿ ನೌಕರರಿಗೆ ಉತ್ತಮ ಸಂಬಳ ಹಾಗೂ ಇನ್ನಿತರ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಮುಖ್ಯಾಧಿಕಾರಿ ಸುರೇಶ್‌ಬಾಬು, ಸದಸ್ಯರಾದ ಎಂ.ಗುರುಪಾದಸ್ವಾಮಿ, ಬಿ.ಎ.ಜಮಾಲುದ್ದೀನ್, ಬಿ.ಡಿ.ಚನ್ನ ಕೇಶವ, ಸತ್ಯವೇಲು ಇದ್ದರು.

ಪ್ರತಿಭಟನೆಯಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ್, ಪ್ರಮುಖರಾದ ಸಮದ್, ಪ್ರಕಾಶ್, ಅರವಿಂದ್ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.