ಹಾಸನ: ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ದರ ಗಗನಕ್ಕೇರಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 70–80ರಂತೆ ಮಾರಾಟವಾಗುತ್ತಿದೆ.
ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಟೊಮೆಟೊ ದರ ಮತ್ತಷ್ಟು ಏರಿಕೆಯಾಗಲಿದೆ. ಮಳೆ ಕೊರೆತೆಯಿಂದಾಗಿ ಇತರೆ ತರಕಾರಿ ಬೆಲೆಯೂ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಿದೆ.
‘ಜಿಲ್ಲೆಯ ಹಳೇಬೀಡು, ಹಿರೀಸಾವೆ, ಚನ್ನರಾಯಪಟ್ಟಣ ಹಾಗೂ ಬೆಂಗಳೂರು ರಸ್ತೆಯ ಕದಂಬಳ್ಳಿ ಭಾಗದಲ್ಲಿ ಟೊಮೆಟೊ ಬೆಳೆಯ ಲಾಗುತ್ತದೆ. ಈ ಬಾರಿಯೂ ಮಳೆ ಯಾಗದೆ ಮಾರುಕಟ್ಟೆಗೆ ಮಾಲು ಕಡಿಮೆ ಬಂದಿದೆ. ಹೊರ ಜಿಲ್ಲೆಗಳಿಂದಲ್ಲೂ ಹೆಚ್ಚು ಮಾಲು ಬರುತ್ತಿಲ್ಲ. ಹೀಗಾಗಿ ದರ ಹೆಚ್ಚಾಗಿದೆ’ ಎನ್ನುತ್ತಾರೆ ವ್ಯಾಪಾರಿ ರಮೇಶ್.
ಕಳೆದ ಕೆಲ ದಿನಗಳಿಂದ ಟೊಮೆಟೊ ದರದಲ್ಲಿ ಇಳಿಕೆ ಆಗುತ್ತಿಲ್ಲ. ಇದು ಗೃಹಿಣಿಯರಿಗೆ ಕಣ್ಣೀರು ತರಿಸಿದೆ. ಹದಿನೈದು ದಿನಗಳ ಹಿಂದೆ ಕೆ.ಜಿ. ಹಸಿ ಬಟಾಣಿ ₹ 150ಕ್ಕೆ ಮಾರಾಟ ವಾಗುತ್ತಿತ್ತು. ಈಗ ₹ 80ಕ್ಕೆ ಇಳಿಕೆಯಾಗಿದೆ.
ಉಳಿದಂತೆ ಪ್ರತಿ ಕೆ.ಜಿ ಬೆಳ್ಳುಳ್ಳಿಗೆ ₹ 80, ಹೂ ಕೋಸು ₹ 30, ಕ್ಯಾರೇಟ್ ₹ 50–60, ಹಸಿಮೆಣಸಿನಕಾಯಿ ₹ 50, ದಪ್ಪಮಣಸಿಕಾಯಿ ₹ 40, ಬೀಟ್ರೂಟ್ ₹ 30, ನುಗ್ಗೇಕಾಯಿ ₹ 60, ಪಚ್ಚ ಬಾಳೆ ₹ 35, ಪುಟ್ಟಬಾಳೆ ₹ 65–70, ಈರುಳ್ಳಿ ₹ 15, ಬೆಂಡೆಕಾಯಿ ₹ 30, ಮೂಲಂಗಿ ₹30, ಆಲೂಗಡ್ಡೆ ₹ 20, ಸಾಂಬರ ಸೌತೇಕಾಯಿ ₹ 30 ಆಗಿದೆ.
ಮಳೆ ಇಲ್ಲದೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ತೆಂಗು ನಾಶವಾಗಿದೆ. ಕೆಲವೆಡೆ ತೆಂಗು ಸುಳಿ ಬಿದ್ದು ಹೋಗಿದೆ. ಹೀಗಾಗಿ ತೆಂಗಿನಕಾಯಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ದೊಡ್ಡಗಾತ್ರದ ತೆಂಗಿನಕಾಯಿಗೆ ₹ 20 ರಿಂದ ₹ 25 ಇದೆ. ಮಳೆಗಾಲವಾದ ಕಾರಣ ಕೊತ್ತಂಬರಿ ಸೊಪ್ಪು ದರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಕಟ್ಟಿಗೆ ₹ 5 ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.