ಚನ್ನರಾಯಪಟ್ಟಣ: ಗ್ರಾಮ ದೇವತೆ ವಳಗೇರಮ್ಮ ದೇವಿಯ ರಥೋತ್ಸವ ಮತ್ತು ಬಂಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.
ಪಟ್ಟಣದಲ್ಲಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಅಲಂಕೃತ ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಬಾಳೆ ಮರ ಕಡಿದ ನಂತರ ರಥೋತ್ಸವವಕ್ಕೆ ಚಾಲನೆ ನೀಡಲಾಯಿತು.
ಮಂಗಳ ವಾದ್ಯದೊಂದಿಗೆ ರಥೋತ್ಸವ ಸಾಗಿತು. ತಮಟೆ ವಾದ್ಯಕ್ಕೆ ಸೋಮನಕುಣಿತದ ಕಲಾವಿದರು ಗಮನಸೆಳೆದರು.
ರಥ ದೇವಸ್ಥಾನದ ಬಳಿ ಬಂದಿತು. ದೇವರನ್ನು ರಥದಿಂದ ಇಳಿಸಿ, ಭಕ್ತರ ಉದ್ಘೋಷದೊಂದಿಗೆ ಕೆಂಡೋತ್ಸವ ನಡೆಸಲಾಯಿತು. ದೇವಿಯ ಉಯ್ಯಲೋತ್ಸವ, ನಂತರ ಸಿಡಿ ಉತ್ಸವ ನಡೆದವು. ಹರಕೆ ಹೊತ್ತ ಮಹಿಳೆಯರು ಬಾಯಿ ಬೀಗ ಧರಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು.
ಗಮನಸೆಳೆದ ಬಂಡಿ ಉತ್ಸವ: ಗೂರನಹಳ್ಳಿ, ಬಂಡಿಹಳ್ಳಿ, ಕೆರೆಚಿಕ್ಕೇನಹಳ್ಳಿ, ಜನಿವಾರ, ಗುಂಡಶೆಟ್ಟಿಹಳ್ಳಿ, ತಗ್ಯಮ್ಮನ ಬಡಾವಣೆ, ಡಿ.ಕಾಳೇನಹಳ್ಳಿಯಿಂದ ಬಂಡಿಗಳು ಬಂದಿದ್ದವು. ರೈತರು ಬೆಳೆದ ಕಬ್ಬು, ರಾಗಿ, ಜೋಳದ ಫಸಲಿನಿಂದ ಎತ್ತಿನ ಗಾಡಿ, ಎತ್ತುಗಳನ್ನು ಸಿಂಗರಿಸಿ ರಥೋತ್ಸವದಲ್ಲಿ ಪಾಲ್ಗೊಳ್ಳುವುದು ಈ ಉತ್ಸವದ ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.