ADVERTISEMENT

ಟೀಕೆ ಬಿಟ್ಟು ಸೋಲಿಗೆ ಆತ್ಮವಿಮರ್ಶೆ ಮಾಡಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 9:10 IST
Last Updated 22 ಜನವರಿ 2011, 9:10 IST

ಅರಸೀಕೆರೆ:  ಜಿ.ಪಂ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಜಿ.ಪಂ. ಮಾಜಿ ಅಧ್ಯಕ್ಷ ಗೀಜೀಹಳ್ಳಿ ಗುರುಸಿದ್ದಪ್ಪ ಅವರಿಗೆ ಭ್ರಷ್ಟಾಚಾರ ಮತ್ತು ಜಾತೀಯತೆ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಜಿ.ಪಂ ಸದಸ್ಯರಾದ ಹುಚ್ಚೇಗೌಡ ಹಾಗೂ ಬಿಳಿಚೌಡಯ್ಯ ಶುಕ್ರವಾರ ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಜನತೆ ಗುರುಸಿದ್ದಪ್ಪ ಅವರ ರಾಜಕೀಯ ಹಿನ್ನೆಲೆಯನ್ನು ಅರಿತವರಾಗಿದ್ದು, ಈ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಿ ಬುದ್ದಿ ಕಲಿಸಿದ್ದಾರೆ ಎಂಬುದನ್ನು ಪರಾಜಿತರಾದ ಅಭ್ಯರ್ಥಿ ಅರ್ಥ ಮಾಡಿಕೊಂಡು ಸೋಲಿಗೆ ಆತ್ಮ ವಿಮರ್ಶೆ ಮಾಡಿಕೊಳ್ಳುವುದನ್ನು ಬಿಟ್ಟು ಸುಳ್ಳು ಆರೋಪ ಮಾಡಬಾರದು. ಜನರನ್ನು ದಾರಿ ತಪ್ಪಿಸುವ ಮಾರ್ಗ ಹಿಡಿದಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಅ ಪಕ್ಷಕ್ಕೆ ಅನ್ಯಾಯ ಮಾಡಿ ರಾತ್ರೋ ರಾತ್ರಿ ಜೆಡಿಎಸ್ ಪಾಳೆಯಕ್ಕೆ ಬಂದರು. ಆಗಿನ ಜೆಡಿಎಸ್ ಮುಖಂಡ ಹಾಗೂ ಹಾಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರನ್ನು ಇಂದ್ರ, ಚಂದ್ರ ಎಂದು ಹೊಗಳಿದರು. ಈಗ ಬಿಜೆಪಿ ಸೇರಿ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದರು.ಕ್ಷೇತ್ರದಲ್ಲಿ ಜೆಡಿಎಸ್ ಸೋಲಿಸಲು ಅಗ್ಗುಂದ, ಕಣಕಟ್ಟೆ, ಬಾಣಾವರ ಹಾಗೂ ಹಾರನಹಳ್ಳಿ ಜಿ.ಪಂ ಕ್ಷೇತ್ರಗಳಲ್ಲಿ ಬಿಜೆಪಿ ಮುಖಂಡರು ಜಾತಿ ಹಾಗೂ ಉಪಜಾತಿಗಳ ವಿಷಬೀಜ ಬಿತ್ತಿ ಗುಪ್ತ ಸಭೆ ನಡೆಸಿದರು.

ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದರೂ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಜಾತ್ಯತೀತ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಶಾಸಕ ಶಿವಲಿಂಗೇಗೌಡ ಅವರ ಅಭಿವೃದ್ದಿ ಕೆಲಸಗಳೇ ಕಾರಣ ಎಂದು ಅವರು ಪ್ರತಿಪಾದಿಸಿದರು. ಶಾಸಕರು ಕಾಮಗಾರಿ ನಡೆಸದೇ ಬಿಲ್ ಪಾವತಿಸಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸುವ ಗುರುಸಿದ್ದಪ್ಪ, ಬಾಣಾವರ-ಕಣಕಟ್ಟೆ ರಸ್ತೆ ಕಾಮಗಾರಿ ಮಾಡದೇ ಬಿಲ್ ಪಡೆದಿಲ್ಲವೇ ಎಂದು ಪ್ರಶ್ನಿಸಿದರು.ತಾ.ಪಂ ಸದಸ್ಯರಾದ ಹಾರನಹಳ್ಳಿ ಶಿವಮೂರ್ತಿ, ಲಕ್ಷ್ಮಣ, ಬಂದೂರು ರತ್ನಮ್ಮ ಹಾಗೂ ಜಿ.ಪಂ ಮಾಜಿ ಸದಸ್ಯ ಕೆ.ಪಿ.ಶಿವಮೂರ್ತಿ,ಗೊಲ್ಲರಹಳ್ಳಿ ಹನುಮಪ್ಪ, ಸುಬ್ರಮಣ್ಯಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.