ಹಾಸನ: ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಗುರುವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ದರ್ಶನ ಪಡೆದರು. ಈ ಬಾರಿ ಎಂಟು ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಮಾತ್ರವಲ್ಲದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಜನಪ್ರತಿನಿಧಿಗಳು, ಕಲಾವಿದರು, ಕ್ರೀಡಾಪಟುಗಳು ಸಹ ದರ್ಶನ ಪಡೆದರು. ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಭೇಟಿ ನೀಡಿದ್ದರು. ಗಣ್ಯರು ನೇರ ದರ್ಶನದ ₹ 1000 ಟಿಕೆಟ್ ಪಡೆದು ಒಳ ಪ್ರವೇಶಿಸಿದರು.
ದೂರದ ಊರಿನಿಂದ ದೇವಿ ದರ್ಶನಕ್ಕೆ ಬಸ್, ಕಾರು, ದ್ವಿಚಕ್ರ ವಾಹನದಲ್ಲಿ ಬರುವುದು ಸಾಮಾನ್ಯ. ಆದರೆ, ಹಾಸನದ ಹವ್ಯಾಸಿ ಓಟಗಾರರು ಮತ್ತು ಕ್ರೀಡಾಪಟುಗಳು ಶ್ರವಣಬೆಳಗೊಳದಿಂದ ಹಾಸನದವರೆಗೆ 55 ಕಿ.ಮೀ. ಓಡಿ ಬಂದರು. ನಂತರ ದೇವಿಯ ದರ್ಶನ ಪಡೆದರು.
ಭಯೋತ್ಪಾದನೆ ನಿರ್ಮೂಲನೆ, ಸ್ವಚ್ಛಭಾರತ ನಿರ್ಮಾಣ ಮತ್ತು ಆರೋಗ್ಯದ ಬಗ್ಗೆ ಜನ ಜಾಗೃತಿಗಾಗಿ ಹಿರಿಯ ಅಥ್ಲೆಟ್ ಬರಾಳು ಪ್ರಕಾಶ್ (55) ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮ್ಯಾರಾಥಾನ್ ನಲ್ಲಿ ಯುವ ಓಟಗಾರರು, ಮಧ್ಯಮ ವಯಸ್ಕರು ಹಾಗೂ 55 ವರ್ಷ ದಾಟಿದ ಒಟ್ಟು 15 ಮಂದಿ ಸುಮಾರು 55 ಕಿಲೋ ಮೀಟರ್ ಕ್ರಮಿಸಿದರು.
ಈ ಪೈಕಿ ಕೆಲವರು ಹರಕೆ ಈಡೇರಿಕೆಗೂ ಓಡಿದರು. ಉತ್ತಮ ಸಮಾಜದ ನಿರ್ಮಾಣದ ಜೊತೆಗೆ ಅಂತರ್ಜಲ ಮಟ್ಟ ವೃದ್ಧಿಯಾಗಬೇಕು. ಹಾಗೆಯೇ ಪರಿಸರ, ಶಬ್ಧ ಮತ್ತು ವಾಯು ಮಾಲಿನ್ಯ ನಿಲ್ಲಬೇಕು ಎಂಬ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಓಟಗಾರರು ಮಾಡಿದರು.
ದೇವಿ ದರ್ಶನದ ವೇಳೆ ಹೂವು ಅಲಂಕಾರದ ಗುತ್ತಿಗೆ ಪಡೆದಿರುವ ನಾಗ ಎಂಬಾತ ಮಧ್ಯಾಹ್ನ ದೇಗುಲದ ಬಾಗಿಲು ಹಾಕಿಸುತ್ತಿದ್ದಂತೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಆಡಳಿತಗಾರರಿಗೆ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಶಾಹಿಗಳಿಗೆ ಬುದ್ದಿ ಕೊಡಲಿ. ಶಾಂತಿ, ಸಮಾಧಾನ, ಸೌಹಾರ್ದತೆ ರಾಜ್ಯದಲ್ಲಿ ನೆಲೆಸುವಂತೆ ಮಾಡಬೇಕು’ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ‘ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಡುವ ಅವಶ್ಯಕತೆ ಇಲ್ಲ. ಜನರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.