ADVERTISEMENT

`ನಕಲಿ ಮತದಾರರ ಸೃಷ್ಟಿಸಿ ಚುನಾವಣೆ'

ಸಹಕಾರ, ಹಾಲು ಉತ್ಪಾದಕರ ಸಂಘಗಳಲ್ಲಿ ಅವಾಂತರ: ಮಾಜಿ ಶಾಸಕ ಪುಟ್ಟೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:23 IST
Last Updated 3 ಸೆಪ್ಟೆಂಬರ್ 2013, 6:23 IST

ಚನ್ನರಾಯಪಟ್ಟಣ: ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮನಬಂದಂತೆ ಮತದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ದೂರಿದರು.

ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಮುಖಂಡರಾದ ಎಚ್.ಎಸ್. ವಿಜಯಕುಮಾರ್, ಎಂ.ಎ. ಗೋಪಾಲಸ್ವಾಮಿ, ಎಂ.ಎ. ರಂಗಸ್ವಾಮಿ ಮಾತನಾಡಿ, ಚೋಳಂಬಳ್ಳಿ ಗ್ರಾಮದಲ್ಲಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ನಿಯಮ ಮೀರಿ ಮತದಾರರ ಪಟ್ಟಿ ತಯಾರಿಸಲಾಗಿದೆ. ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇದೆ ಪರಿಸ್ಥಿತಿ ಉದ್ಬವಿಸಿದೆ. ನುಗ್ಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ, ಕಾಂಗ್ರೆಸ್ ಮುಖಂಡ ಎಂ.ಎ. ರಂಗಸ್ವಾಮಿ ಅವರಿಗೆ ಸದಸ್ಯತ್ವ ನೀಡುತ್ತಿಲ್ಲ ಎಂದು ದೂರಿದರು.

ಇದನ್ನು ಕೆಲವರು ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಒಂದು ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಹಿಂದಿನ ಮನೋಸ್ಥಿತಿಯಿಂದ ಅವರು ಇನ್ನು ಹೊರಬಂದಂತೆ ಕಾಣುತ್ತಿಲ್ಲ. ಅಷ್ಟರ ಮಟ್ಟಿಗೆ ಅಧಿಕಾರ ಹೆಪ್ಪುಗಟ್ಟಿದೆ. ರಾಜ್ಯಕ್ಕೆ ಒಂದು ಆಡಳಿತ ವ್ಯವಸ್ಥೆ ಇದ್ದರೆ, ಹಾಸನ ಜಿಲ್ಲೆಗೆ ಪ್ರತ್ಯೇಕ ಆಡಳಿತವಿದ್ದಂತೆ ಕಾಣುತ್ತಿದೆ ಎಂದು ಜೆಡಿಎಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು.

8 ವರ್ಷಗಳಿಂದ ತಾಂತ್ರಿಕ ಕಾರಣ ನೀಡಿ ಅನಗತ್ಯವಾಗಿ ಕಬ್ಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಮುಂದೂಡಲಾಗಿತ್ತು. ಆದರೆ ಭಾನುವಾರ 10 ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ ಎಲ್ಲಾ 10 ಸದಸ್ಯರು ಆಯ್ಕೆಯಾಗಿದ್ದಾರೆ ಎಂದರು.

ಮುಖಂಡರಾದ ಆರ್. ರಂಗೇಗೌಡ, ಗಣೇಶ್ ಗೌಡ ಇದ್ದರು.
ಕಬ್ಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೆಶಕರು- ಕೆ.ಜಿ. ಗಣೇಶ್‌ಗೌಡ, ಬಿ. ರಂಗೇಗೌಡ, ಎಂ. ಪುಟ್ಟಸ್ವಾಮಿಗೌಡ, ಡಿ.ಸಿ. ದೇವರಾಜು, ಎಸ್. ನಾರಾಯಣಗೌಡ, ಕೆ. ರಾಜು, ರೇಖಾ ಶಿವಾನಂದ್, ಕಾಂಚನ ಶಿವಕುಮಾರ್, ಕಾಂತರಾಜೇಗೌಡ, ನಂಜುಂಡಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.