ADVERTISEMENT

ನನಸಾದ ಹಳ್ಳಿ ಜನರ ಕನಸು: ಹರ್ಷ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:00 IST
Last Updated 28 ಜನವರಿ 2012, 10:00 IST

ಹಳೇಬೀಡು: ಬೇಲೂರು ಯಗಚಿ ನದಿಯಿಂದ ಹಳೇಬೀಡು ಹೋಬಳಿಯ 12 ಹಳ್ಳಿಗಳಿಗೆ ಕುಡಿಯುವ ಪೂರೈಕೆ ಮಾಡುವ ಪೈಪ್‌ಲೈನ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮಾಯಗೊಂಡನಹಳ್ಳಿ ಗ್ರಾಮಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.

ಗ್ರಾಮಕ್ಕೆ ನಲ್ಲಿ ನೀರು ಸರಬರಾಜು ಮಾಡುತ್ತಿದ್ದ ಓವರ್‌ಹೆಡ್ ಟ್ಯಾಂಕ್ ಬಳಿ ನದಿ ನೀರು ತುಂಬಿಸಲು ಮತ್ತೊಂದು ಟ್ಯಾಂಕ್ ನಿರ್ಮಿಸಲಾಗಿದೆ. ಪೈಪ್‌ಲೈನಿನಲ್ಲಿ ಹರಿಯತ್ತಿರುವ ನೀರನ್ನು ನಿಯಂತ್ರಣ ಮಾಡುವವರೆ ಇಲ್ಲದ್ದರಿಂದ ಟ್ಯಾಂಕಿನಿಂದ ನೀರು ತುಂಬಿ   ತುಳುಕುತ್ತಿದೆ.

`ಒಂದು ಊರಿಗೆ ಆಗುವಷ್ಟು ನೀರು ಪೋಲಾಗುತ್ತಿದೆ. ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವು ಕಡಿಮೆಯಾಗುವ ಸಾಧ್ಯತೆ ಇದೆ. ಯಗಚಿ ಕುಡಿಯುವ ನೀರು ಸರಬರಾಜು ಮೆಲ್ವೀಚಾರಣೆ ಹೊಣೆ ಹೊತ್ತಿರುವವರು ನೀರಿನ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಭಾರೀ ಪ್ರಮಾಣದಲ್ಲಿ ನೀರು ಚರಂಡಿ ಇಲ್ಲವೆ ರಸ್ತೆ ಪಾಲಾಗುತ್ತದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ನಿಂಗಪ್ಪ ತಿಳಿಸಿದ್ದಾರೆ.

ಕಲ್ಲಳ್ಳಿ ಅರಣ್ಯ ಪ್ರದೇಶದಲ್ಲಿ ಪೈಪ್‌ಲೈನ್ ಅಲ್ಲಲ್ಲೆ ಕಿತ್ತುಹೋಗುತ್ತಿದ್ದು ಭಾರಿ ನೀರು ಅರಣ್ಯ ಪಾಲಾಗುತ್ತಿದೆ. ಸಾಕಷ್ಟು ಸ್ಥಳದಲ್ಲಿ ಪೈಪ್ ಜಖಂ ಆಗುತ್ತಿದೆ. ಹಳ್ಳಿಗರು ಯಗಚಿ ನದಿ ನೀರು ಬಳಕೆ ಮಾಡುವ ಸಮಯಕ್ಕೆ ಸರಿಯಾಗಿ ಪೈಪ್‌ಲೈನ್ ಬಂದೋಬಸ್ತ್ ಮಾಡಬೇಕು ಎನ್ನುತ್ತಾರೆ ಸ್ಥಳೀಯರು.

`ಯಗಚಿನದಿ ನೀರನ್ನು ಹಳೇಬೀಡು ಹೋಬಳಿಯ ಎಷ್ಟು ಗ್ರಾಮಗಳಿಗೆ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಜಿ.ಪಂ ಎಂಜಿನಿಯರ್ ಬಳಿ ದಾಖಲಾತಿ ಕೇಳಲಾಗಿದೆ. ದಾಖಲಾತಿ ಅಧ್ಯಯನ ನಡೆಸಿ ಹಳೇಬೀಡು ಹೋಬಳಿಯ ಪ್ರತಿ ಗ್ರಾಪಂಗೂ ಯಗಚಿ ಕುಡಿಯುವ ನೀರು ಹರಿಸಬೇಕು ಎಂದು ಜಿ.ಪಂಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಂತಹ ಅವಕಾಶ ದೊರಕದಿದ್ದರೆ ಅರಸೀಕೆರೆ ಪಟ್ಟಣಕ್ಕೆ ಹಳೇಬೀಡು ಮುಖಾಂತರ ಹರಿಯುವ ನೀರಿಗೆ ತಡೆಹೊಡ್ಡಿ ಪ್ರತಿಭಟನೆ ನಡೆಸಲಾಗುವುದು ಎಂದು ತಾ.ಪಂ ಸದಸ್ಯ ಬಿ.ಎಸ್. ಸೋಮಶೇಖರ್ ಹೇಳುತ್ತಾರೆ.

ಮಾದಿಹಳ್ಳಿ ಹೋಬಳಿಯಲ್ಲಿಯೂ ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ಹೋಬಳಿ ಮುಖಾಂತರವೆ ಯಗಚಿ ನದಿ ಹರಿಯುತ್ತದೆ. ಶುದ್ಧ ನೀರು ಇಲ್ಲದಿರುವ ಹಾಗೂ ಅಂತರ್ಜಲ ಕಡಿಮೆಯಾಗಿರುವ ಗ್ರಾಮ ಗುರುತಿಸಿ ನದಿ ನೀರು ನೀಡಬೇಕು ಎಂಬುದು ಹಗರೆ ಗ್ರಾ.ಪಂ ಮಾಜಿ ಅಧ್ಯಕ್ಷ ಡಿಶಂತ್ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.