ADVERTISEMENT

ನೇಗಿಲು ಹಿಡಿದು ಉಳುಮೆಗೆ ಇಳಿದರು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 6:47 IST
Last Updated 28 ಅಕ್ಟೋಬರ್ 2017, 6:47 IST
ಹಾಸನದ ಟೈಮ್ಸ್‌ ಶಾಲೆಯ ಮಕ್ಕಳು ಜಮೀನಿನಲ್ಲಿ ಉಳುಮೆ ಮಾಡಿದರು.
ಹಾಸನದ ಟೈಮ್ಸ್‌ ಶಾಲೆಯ ಮಕ್ಕಳು ಜಮೀನಿನಲ್ಲಿ ಉಳುಮೆ ಮಾಡಿದರು.   

ಹಾಸನ: ತೂಕದ ಬ್ಯಾಗ್ ಹೊತ್ತು, ಕೈಯಲ್ಲಿ ಪೆನ್ ಹಿಡಿದು, ದಿನ ನಿತ್ಯ ಹೋಂ ವರ್ಕ್ ಗಾಗಿ ತಲೆ ಕೆಡಿಸಿಕೊಳ್ಳುವ ಮಕ್ಕಳಿಗೆ ಒಂದಿಷ್ಟು ರಿಲಿಫ್ ಸಿಕ್ಕಿತು. ನಗರದ ಟೈಮ್ಸ್ ಅಂತರರಾಷ್ಟ್ರೀಯ ಶಾಲೆಯ ಮಕ್ಕಳು ರೈತರ ಜಮೀನಿನಲ್ಲಿ ತಾವೇ ನೇಗಿಲು ಹಿಡಿದು ಉಳುಮೆ ಮಾಡಿದರು. ಜೋಳ ಬಿತ್ತುವ ಮೂಲಕ ರೈತರ ಬದುಕು ಪರಿಚಯ ಮಾಡಿಕೊಂಡರು.

ಹಳ್ಳಿ ಬದುಕಿನ ಆರೋಗ್ಯ ಭರಿತ ವಾತಾವರಣ ಪರಿಚಯಿಸುವ ಸಲುವಾಗಿ ‘ಟೈಮ್ಸ್ ಶಾಲೆಯ ನಡಿಗೆ ಹಳ್ಳಿಯ ಕಡೆಗೆ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಯಾಂತ್ರಿಕತೆಯಲ್ಲಿ ಸಿಲುಕಿ ಕೇವಲ ಅಂಕಗಳಿಕೆಗೆ ಸೀಮಿತವಾಗುತ್ತಿರುವ ಶೈಕ್ಷಣಿಕ ಪದ್ಧತಿಯಲ್ಲಿ ವಿದ್ಯಾರ್ಥಿ ಹಾಗೂ ಪೋಷಕರ ಮನ ಪರಿವರ್ತಿಸುವುದರ ಜತೆಗೆ ಹಳ್ಳಿ ಬದುಕಿನ ಚಿತ್ರಣ ಕಟ್ಟಿ ಕೊಡುವ ಪ್ರಯತ್ನ ಮಾಡಲಾಯಿತು.

ಹಳೇಬೀಡು ಸಮೀಪದ ಹುಲಿಕೆರೆ ಗ್ರಾಮದ ಕೃಷ್ಣೇಗೌಡ, ಚಂದ್ರೇಗೌಡ ಜಮೀನಿನಲ್ಲಿ ವಿದ್ಯಾರ್ಥಿಗಳಿಗೆ ನೇಗಿಲು, ನೊಗ, ಕುಂಟೆ ಮುಂತಾದ ಕೃಷಿ ಪರಿಕರ
ಪರಿಚಯಿಸಲಾಯಿತು. ಉಳುಮೆ ಕೆಲಸವನ್ನು ಮಕ್ಕಳಿಂದ ಮಾಡಿಸಿ, ಅನ್ನದಾತರ ಬದುಕು, ಬವಣೆ ಬಗ್ಗೆ ವಿವರಿಸಲಾಯಿತು.

ADVERTISEMENT

‘ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಕೃಷಿ ಅಧಿಕಾರಿಗಳ ಸಹಯೋಗದೊಂದಿಗೆ ದೊಡ್ಡ ಕಣಗಾಲ್ ಗ್ರಾಮದಲ್ಲಿ ಭತ್ತ ನಾಟಿ ಮಾಡುವ ಪದ್ಧತಿ ಹಾಗೂ ಉದಯಪುರ ಗ್ರಾಮದಲ್ಲಿ ರೇಷ್ಮೆ ತೋಟದಲ್ಲಿ ಅಧಿಕಾರಿಗಳ ಜೊತೆ ಸಂವಾದ ನಡೆಸಲಾಗಿತ್ತು’ ಎಂದು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಕೆ.ಗಂಗಾಧರ್‌ ಹೇಳಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎ.ಬಿ. ಸುರೇಂದ್ರಕುಮಾರ್ , ಪ್ರಾಂಶುಪಾಲೆ ಉಮಾ ಎಸ್. ಪಾಟೀಲ್ ಹಾಗೂ ಶಿಕ್ಷಕರು ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.
‘ಕೃಷಿ ಜಮೀನು ಹೇಗೆ ಉಳುಮೆ ಮಾಡುತ್ತಾರೆ ಎಂಬುದು ಗೊತ್ತಿರಲಿಲ್ಲ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಸಂತಸವನ್ನುಂಟು ಮಾಡಿದೆ. ಕೃಷಿ ಪರಿಕರಗಳ ಬಗ್ಗೆ ತಿಳಿದುಕೊಳ್ಳಲಾಯಿತು’ ಎಂದು ವಿದ್ಯಾರ್ಥಿ ಭೂಮಿಕಾ ತಿಳಿಸಿದರು.

‘ಶಾಲಾ ಹಂತದಲ್ಲಿ ಪೋಷಕರು ಹಾಗೂ ಶಿಕ್ಷಕರು ಪ್ರತಿ ನಿತ್ಯ ಓದುವಂತೆ ಒತ್ತಡ ಹಾಕುತ್ತಾರೆ. ಆದರೆ ಶಾಲಾ ಆಡಳಿತ ಮಂಡಳಿ ಗ್ರಾಮೀಣ ಜನರು ಬದುಕನ್ನು ತೋರಿಸಿಕೊಡುವ ಮೂಲಕ ರೈತರು ಹಾಗೂ ಕೃಷಿಕರ ಬಗ್ಗೆ ಪ್ರೀತಿ ಮೂಡುವಂತೆ ಮಾಡಿದೆ’ ಎಂದು ವಿದ್ಯಾರ್ಥಿ ಪ್ರೇಕ್ಷಿತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.