ADVERTISEMENT

ಬಹಿಷ್ಕಾರಕ್ಕೆ ಖಂಡನೆ: 19ರಿಂದ ಬಿಎಸ್‌ಪಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 10:15 IST
Last Updated 17 ಅಕ್ಟೋಬರ್ 2011, 10:15 IST

ಅರಕಲಗೂಡು: ತಾಲ್ಲೂಕಿನ ಸಿದ್ದಾಪುರ ಗ್ರಾಮದ ದಲಿತರ ಮೇಲಿನ ಬಹಿಷ್ಕಾರ ಖಂಡಿಸಿ ಬಿಎಸ್‌ಪಿ ಅ.19ರಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಕೇವಲ ದೌರ್ಜನ್ಯ ಖಂಡಿಸುವುದಷ್ಟೆ ಅಲ್ಲ, ಸವರ್ಣೀಯರ ಮನ ಪರಿವರ್ತನೆಯ ಉದ್ದೇಶ ಹೊಂದಿದೆ ಎಂದು ಬಿ.ಎಸ್.ಪಿ. ಮುಖಂಡ ಬಿ.ಸಿ.ರಾಜೇಶ್ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲಿತ ವರ್ಗಗಳ ಮೇಲೆ ನಡೆಯುವ ದೌರ್ಜನ್ಯ ಶಿಕ್ಷಾರ್ಹ ಅಪರಾಧ ಎಂದು ಕಾನೂನು ರೂಪಿಸಿದ್ದರೂ ಇದು ನಿರಂತರವಾಗಿ ನಡೆಯುತ್ತಲೆ  ಬಂದಿದೆ. ಕೇವಲ ಕಾನೂನಿನಿಂದ ಇದನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಸಿದ್ದಾಪುರದಿಂದ ಆರಂಭಿಸುವ ಯಾತ್ರೆಯಲ್ಲಿ ಬೌದ್ದ ಗುರು ಬೆಂತೇಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಪಾಲ್ಗೊಳ್ಳುವರು. ಒಂದು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವ ಪಾದಯಾತ್ರೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಅ. 19 ರಂದು ಸಿದ್ದಾಪುರದಿಂದ ಹೊರಟು ಉಳ್ಳೇನಹಳ್ಳಿ ಮಾರ್ಗ ವಾಗಿ ಕೊಣನೂರು, ರಾಮನಾಥಪುರ, ಬಸವಾ ಪಟ್ಟ ಣದಲ್ಲಿ ಸಾಗಿ ಬೆಳವಾಡಿಯಲ್ಲಿ ತಂಗಲಿದೆ ಎಂದರು.

20 ರಂದು ಬೆಳವಾಡಿಯಿಂದ ಕೊರಟಿಕರೆ, ದೊಡ್ಡಮಗ್ಗೆ, ಅರಕಲಗೂಡು ಮೂಲಕ ಸಂಚರಿಸಿ ಗೊರೂರಿನಲ್ಲಿ ತಂಗಲಾಗುವುದು. ಅ. 21 ರಂದು ಗೊರೂರಿನಿಂದ ಕಟ್ಟಾಯ ಮಾರ್ಗ ಸಂಚರಿಸಿ ದೊಡ್ಡಬಾಗನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದೆ. ಅ 22 ರಂದು ಹಾಸನಕ್ಕೆ ತೆರಳಿ ಬಹಿರಂಗ ಸಭೆ ನಡೆಸಲಾಗುವುದು. ಇಲ್ಲಿ ನಡೆಯುವ ಸಭೆಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಿ.ಸ್.ಪಿ. ಕಾರ್ಯಕರ್ತರು ಬರಲಿದ್ದಾರೆ ಎಂದರು.

ಪಾದಯಾತ್ರೆಯಲ್ಲಿ ಪ್ರಗತಿ ಪರ ಸಂಘಟನೆಗಳು, ದಲಿತ ಸಂಘಟನೆಗಳ ಸಂಗಡ ಸಾರ್ವಜನಿಕರೂ ಸಹ ಪಾಲ್ಗೊಂಡು ಈ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಬೇಕು. ಆಗ ಸಮಸ್ಯೆಯ ಆಳ ಹಾಗೂ ಅದರ ಕರಾಳತೆಯ ಅರಿವು ಜನರಿಗೆ ಆಗಲಿದೆ ಎಂದರು. ದಲಿತ ಸಂಘಟನೆಗಳ ಮುಖಂಡರಾದ ವಿಜಯಕುಮಾರ್, ಗಣೇಶ್‌ವೇಲಾಪುರಿ, ಚಂದ್ರು ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.