ಹಾಸನ: ಬಾಬರಿ ಮಸೀದಿ ಧ್ವಂಸ ಪ್ರಕರಣ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ದಿಂದ ಹೇಮಾವತಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.
ಲಿಬರಾಹಾನ್ ಆಯೋಗ ವರದಿಯಲ್ಲಿ ಉಲ್ಲೇಖಿಸಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಸೀದಿ ಧ್ವಂಸಗೊಂಡು ಡಿ. 6ಕ್ಕೆ 25 ವರ್ಷಗಳಾಗುತ್ತಿದ್ದರೂ ಪ್ರಕರಣದಲ್ಲಿ ಭಾಗಿಯಾಗಿರುವ 68 ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
1992ರ ಡಿ. 6ರಂದು ಬಾಬರಿ ಮಸೀದಿ ಧ್ವಂಸ ಇತಿಹಾಸ ಪುಟಗಳಲ್ಲಿ ಮರೆಯಲಾಗದ ಅವಮಾನ. ಅಂದಿನ ಪ್ರಧಾನಿ ಅದೇ ಸ್ಥಳದಲ್ಲಿ ಮಸೀದಿ ಪುನರ್ ನಿರ್ಮಿಸುವುದಾಗಿ ಹಾಗೂ ಆರೋಪಿಗಳನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಆರೋಪಿಗಳನ್ನು ಶಿಕ್ಷಿಸುವ ಬದಲು ಇಂದು ಉನ್ನತ ಸ್ಥಾನ ಮಾನ ಹಾಗೂ ಸಂಪುಟ ದರ್ಜೆಯ ಸಚಿವ ಸ್ಥಾನಗಳನ್ನು ನೀಡಿ ಗೌರವಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮಸೀದಿ ಧ್ವಂಸದ ಬಳಿಕ ಆರ್ಎಸ್ಎಸ್ ಮತ್ತು ಅದರ ಗುಂಪುಗಳು ಹಿಂದೂ, ಮುಸ್ಲಿಂ, ದಲಿತರು ಮತ್ತು ಆದಿವಾಸಿಗಳನ್ನು ಬಲಿಪಶುಗಳನ್ನಾಗಿ ಮಾಡುವುದರ ಮೂಲಕ ದೇಶವನ್ನು ವಿಭಜಿಸುವ ಸಂಚನ್ನು ರೂಪಿಸುತ್ತಿವೆ’ ಎಂದು ಆರೋಪಿಸಿದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಪೈರೋಜ್ ಪಾಷ, ಉಪಾಧ್ಯಕ್ಷ ಅಮೀರ್ ಜಾನ್, ಮುಖಂಡರಾದ ಸಿದ್ದಿಕ್ ಆನೆಮಹಲ್, ಖಾಜಿಮ್, ಅಫ್ಜಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.