ಹಳೇಬೀಡು: ಹೆಚ್ಚಿನ ಆದಾಯ ಪಡೆದು ಸ್ವಾವಲಂಬಿ ಕೃಷಿಕರಾಗ ಬೇಕು. ಆರ್ಥಿಕವಾಗಿ ಸಬಲರಾಗಬೇಕು ಎಂದು ಅರಿಸಿನ ಬೆಳೆದ ರೈತರು ಕೈಗೆ ಬಂದ ಫಸಲನ್ನು ಕೇಳುವವರಿಲ್ಲದೆ ಕಂಗಾಲಾಗಿದ್ದಾರೆ.
ಬೆಳೆದು ನಿಂತ ಫಸಲು ಜಮೀನಿ ನಲ್ಲಿಯೇ ಉಳಿದಿದ್ದು, ಮಳೆ ಬಿದ್ದರೆ ಮೊಳಕೆಯೊಡೆದು ಬೆಳೆಯಲಾ ರಂಭಿಸುತ್ತದೆ. ಮುಂದಿನ ನಿರ್ವಹಣೆ ಮಾಡುವುದಾದರೂ ಹೇಗೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ.
ಹಳೇಬೀಡು, ಮಾದಿಹಳ್ಳಿ ಹೋಬಳಿಗಳಲ್ಲಿ ಅರಿಸಿನ ಮುಖ್ಯ ಬೆಳೆ ಅಲ್ಲದಿದ್ದರೂ ಬಹು ವರ್ಷದಿಂದ ರೈತರು ಕೆಲವೇ ಗುಂಟೆ ಭೂಮಿಯಲ್ಲಿ ಬೆಳೆಯುತ್ತ್ದ್ದಿದಾರೆ. ಹತ್ತಾರು ಎಕರೆ ಜಮೀನು ಹೊಂದಿದ್ದ ಕೆಲವು ರೈತರು ಮಾತ್ರ ಒಂದೆರೆಡು ಎಕರೆಯಲ್ಲಿ ಅರಿಸಿನ ಬೆಳೆಯುತ್ತಿದ್ದರು. ಕಳೆದ ವರ್ಷ ಬಾರಿ ಬೆಲೆ ಬಂದಿದ್ದರಿಂದ ಸಾಕಷ್ಟು ರೈತರು ಅರಿಸಿನ ಬೆಳೆದು ಈಗ ಕೈ ಸುಟ್ಟುಕೊಂಡಿದ್ದಾರೆ.
ಸಮೃದ್ಧವಾದ ಫಸಲು ಬಂದಿದ್ದು, ಖರೀದಿ ಮಾಡುವವರೇ ಇಲ್ಲದೆ ಬೆಳೆ ಭೂಮಿಯಲ್ಲಿಯೇ ಉಳಿದಿದೆ.
`ಒಂದು ಎಕರೆ ಅರಿಸಿನ ಕಟಾವು ಮಾಡಲು ಕಡಿಮೆ ಎಂದರೂ ರೂ.25 ಸಾವಿರ ವೆಚ್ಚವಾಗುತ್ತದೆ. ಕಟಾವು ಮಾಡಿ ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೂ ಕಾರ್ಮಿಕರಿಗೆ ಕೂಲಿ ಕೊಡುವುದಕ್ಕೂ ಹಣ ಸಾಕಾಗುವುದಿಲ್ಲ. ಜಮೀನಿಗೆ ಕಾಲಿಟ್ಟು ಕಟಾವಿಗೆ ಕೈ ಹಾಕಿದರೆ ಮೈಮೇಲೆ ಬರುತ್ತದೆ~ ಎನ್ನುತ್ತಾರೆ ಬೆಳೆಗಾರ ಬಸ್ತಿಹಳ್ಳಿ ಗ್ರಾಮದ ಬಿ.ಬಿ.ಶಿವಮೂರ್ತಿ.
ಹೆಚ್ಚಿನ ರೈತರು ಬೆಳೆ ಬೆಳೆಯಲು ಮುಂದಾಗಿದ್ದರಿಂದ ಸ್ಥಳೀಯವಾಗಿ ಎಲ್ಲರಿಗೂ ಬಿತ್ತನೆ ಅರಿಸಿನ ದೊರಕದೆ ದೂರದ ಚಾಮರಾಜನಗರ ಜಿಲ್ಲೆ ಯಿಂದ ಗುಣಮಟ್ಟದ ಅರಿಸಿನ ತಂದು ನಾಟಿ ಮಾಡಿದರು. ಕೀಟ ರೋಗ ಬಾಧೆ ಕಾಣಿಸದೆ ಬೆಳೆ ಸಮೃದ್ದ ವಾಗಿಯೇ ಬಂದಿತು. ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಳೆಯನ್ನು ಕಂಡ ರೈತ ಕಟ್ಟುತ್ತಿದ್ದ ಕನಸುಗಳು ಈಗ ಮಣ್ಣಿನಲ್ಲಿ ಮುಚ್ಚಿಹೋಗುತ್ತಿವೆ.
ಬೆಳೆ ಕಟಾವು ಮಾಡಿ ಬೆಲೆ ಬರುವವರೆಗೂ ದಾಸ್ತಾನು ಮಾಡು ವುದು ಸುಲಭ ಸಾಧ್ಯವಲ್ಲ. ಹಸಿಯಾದ ಅರಿಸಿನವನ್ನು ಸಂಗ್ರಹಿಸಿಟ್ಟರೆ ಕೊಳೆತು ಕರಗಿ ಹೋಗುತ್ತದೆ. ಬೇಯಿಸಿದ ಅರಿಸಿನಕ್ಕೆ ಹುಳು ಆವರಿಸಿ ಪುಡಿಯಾಗುತ್ತದೆ. ಜಮೀನಿನ ತುಂಬಾ ಮಣ್ಣಿನಡಿಯಲ್ಲಿ ಗೆಡ್ಡೆ ತುಂಬಿರುವುದರಿಂದ ಅರಿಸಿನ ಮರೆತು ಮುಂದಿನ ಬೆಳೆಗೆ ಸಜ್ಜಾಗುವುದು ಅಸಾಧ್ಯದ ಕೆಲಸವಾಗಿದೆ.
ಕಳೆದ ತಿಂಗಳು ಒಂದು ಕ್ವಿಂಟಲ್ಗೆ ರೂ.200 ರಂತೆ ಅರಿಸಿನ ಮಾರಾಟ ವಾಯಿತು. ಜಮೀನು ಖಾಲಿಯಾದರೆ ಸಾಕು ಎಂದು ನಷ್ಟವಾದರೂ ಸಿಕ್ಕಿದಷ್ಟು ಹಣಕ್ಕೆ ಮಾರಾಟ ಮಾಡಿ ಕೆಲವರು ಕೈತೊಳೆದು ಕೊಂಡರು. ಬೇಡಿಕೆ ಇಲ್ಲದೆ ವ್ಯಾಪಾರಿಗಳು ರೈತರತ್ತ ಸುಳಿಯುತ್ತಿಲ್ಲ. ಬೇಯಿಸಿದ ಅರಿಸಿನಕ್ಕೆ ಕ್ವಿಂಟಲ್ಗೆ ರೂ.2,600 ಬೆಲೆ ಇದೆ.
ಬೆಂದ ಅರಿಸಿನ ತೇವಾಂಶ ಕಳೆದುಕೊಂಡು ಚೇಗಿನಂತಾಗು ವುದರಿಂದ ತೂಕ ಬರುವುದಿಲ್ಲ. ಹೀಗಾಗಿ ರೈತರೆ ಅರಿಸಿನ ಬೇಯಿಸಿದರೂ ನಷ್ಟ ಕಟ್ಟಿಟ್ಟ ಬುತ್ತಿ.
ಕಳೆದ ವರ್ಷ ಬಿತ್ತನೆ ಸಂದರ್ಭದಲ್ಲಿ ಬಿತ್ತನೆ ಅರಿಸಿನದ ಬೆಲೆ ಕ್ವಿಂಟಲ್ಗೆ ರೂ.4 ಸಾವಿರ ಇತ್ತು. ಹೀಗಾಗಿ ಒಂದು ಎಕರೆ ಅರಿಸಿನ ಬೆಳೆಯಲು ಬಿತ್ತನೆಯಿಂದ ಕಟಾವಿನ ವರೆಗೆ ರೂ.60 ಸಾವಿರ ವೆಚ್ಚವಾಗಿದೆ. ಈಗ ವ್ಯಾಪಾರಿಗಳು ಅರಿಸಿನ ಖರೀದಿಸಿದರೂ ಖರ್ಚು ಮಾಡಿದ ಶೇ. 10 ರಷ್ಟು ಹಣವೂ ಕೈಗೆ ಸಿಗುವುದಿಲ್ಲ ಎನ್ನುತ್ತಾರೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಿ.ಪಿ.ಜಯರಾಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.