ADVERTISEMENT

ಭದ್ರತಾ ಕೊಠಡಿ, ಮತ ಎಣಿಕೆ ಕೇಂದ್ರ ಪರಿಶೀಲನೆ

ನೀತಿ ಸಂಹಿತೆ: ಜೆಸಿಬಿ ವಾಹನ ವಶ, ಎಂಜಿನಿಯರ್ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 8:45 IST
Last Updated 12 ಏಪ್ರಿಲ್ 2018, 8:45 IST

ಹಾಸನ: ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಲಾಗುತ್ತಿರುವ ಮತ ಎಣಿಕೆ ಕೊಠಡಿ ಮತ್ತು ಭದ್ರತಾ ಕೊಠಡಿಗಳನ್ನು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳು (ಇ.ವಿ.ಎಂ) ಮತ್ತು ವಿವಿಪ್ಯಾಟ್‍ಗಳ ದಾಸ್ತಾನು ಇರಿಸುವುದರ ಜೊತೆಗೆ ಇದೇ ಕೇಂದ್ರದಲ್ಲಿ ಮತ ಎಣಿಕೆಯೂ ನಡೆಯಲಿದೆ.

ಮತ ಎಣಿಕೆ ಮತ್ತು ಭದ್ರತಾ ಕೊಠಡಿಗಳನ್ನು ಸ್ಥಾಪಿಸುವ ಸಂಬಂಧ ಸೂಕ್ತ ಸ್ಥಳಾವಕಾಶ ಗುರುತಿಸಲು ಲೋಕೋಪಯೋಗಿ, ಸೆಸ್ಕ್ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಅವರು, ಅವುಗಳ ಪ್ರಮಾಣಪತ್ರವನ್ನು ದೃಢೀಕರಿಸಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರುಲಿಂಗಪ್ಪ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಸಿದ್ದೇಗೌಡ, ಚುನಾವಣಾ ತಹಶೀಲ್ದಾರ್ ಶಿವಲಿಂಗಮೂರ್ತಿ ಮತ್ತು ಚುನಾವಣಾ ಶಿರಸ್ತೇದಾರ್ ಕೆ.ಎಂ.ಸಿದ್ದರಾಜು ಹಾಜರಿದ್ದರು.

ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದಂತೆ ಮತ್ತೆರಡು ಪ್ರಕರಣ ದಾಖಲಾಗಿದೆ. ಬೇಲೂರು ತಾಲ್ಲೂಕು ಹಳೆ ಹಗರೆ ಗ್ರಾಮದಲ್ಲಿ ಗ್ರಾಮ ಸಹಾಯಕರು ನೀಡಿದ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಭೂ ಸೇನಾ ನಿಗಮದ ವತಿಯಿಂದ ಜೆ.ಸಿ.ಬಿ. ಬಳಸಿ ಕಾಮಗಾರಿ ನಡೆಸಲಾಗುತ್ತಿತ್ತು. ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಂಗನೂರು ಮತ್ತು ಸಹಾಯಕ ಎಂಜಿನಿಯರ್‌ ಸಿದ್ದಪ್ಪನವರ ವಿರುದ್ಧ ಪ್ರಕರಣ ದಾಖಲಿಸಿ ಜೆ.ಸಿ.ಬಿ. ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಹಾಸನ ತಾಲ್ಲೂಕಿನ ಕಬ್ಬತ್ತಿ ಗ್ರಾಮದ ಲೋಕೇಶ್ ಎಂಬುವವರ ಮನೆ ಮೇಲೆ ದಾಳಿ ನಡೆಸಿದಾಗ ಬಿಜೆಪಿ ಚಿಹ್ನೆಯ ಸೀರೆ, ಶರ್ಟ್ ಮತ್ತು ಪ್ಯಾಂಟ್, 12 ಟಾರ್ಪಲ್‌ ಬ್ಯಾಗ್‌ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

12 ಎಫ್ಐಆರ್‌ ದಾಖಲು

ಹಾಸನ: ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈವರೆಗೂ 12 ಪ್ರಥಮ ವರ್ತಮಾನ ವರದಿ (ಎಫ್.ಐ.ಆರ್) ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ತಲಾ 3, ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ (ಎಂ.ಇ.ಪಿ.) ವಿರುದ್ಧ ತಲಾ 1 ಹಾಗೂ ಇತರೆ 4 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಕ್ರಮವಾಗಿ ಕೊಳವೆಬಾವಿ ಕೊರೆಯುವಿಕೆ, ಆಹಾರ ವಿತರಣೆ, ಅನುಮತಿ ಪಡೆಯದೆ ಪ್ರಚಾರ ನಡೆಸಿರುವುದು, ಅಕ್ರಮ ಮದ್ಯ ಮಾರಾಟ, ಪಕ್ಷದ ಪ್ರಚಾರ ಸಾಮಗ್ರಿ ದಾಸ್ತಾನು ಇರಿಸಿರುವುದು, ಪ್ರವಾಸಿ ಮಂದಿರದ ಕೊಠಡಿ ದುರ್ಬಳಕೆ ಸೇರಿದಂತೆ ಇತರೆ ಕಾರಣಗಳಿಗಾಗಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಕ್ರಮ ತಡೆಗೆ ಕರೆಮಾಡಿ ದೂರು ನೀಡಿ

ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ, ದೂರನ್ನು ಶುಲ್ಕ ರಹಿತ ದೂ. 18004252550ಗೆ ದಾಖಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.