ಹೊಳೆನರಸೀಪುರ: ಕೃಷಿ ಕಾರ್ಮಿಕರ ಕೊರತೆಯಿಂದ ಅನೇಕ ರೈತರು ಫಲವತ್ತಾದ ಭೂಮಿ ಪಾಳುಬಿಟ್ಟು ಬೇಸಾಯವನ್ನೇ ನಿಲ್ಲಿಸಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದೆ ಆಹಾರ ಕೊರತೆ ಎದುರಿಸಬೇಕಾ ಗುತ್ತದೆ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಭಾನುಪ್ರಕಾಶ್ ರೈತರನ್ನು ಎಚ್ಚರಿಸಿದರು.
ಇತ್ತೀಚೆಗೆ ತಾಲ್ಲೂಕಿನ ದೊಡ್ಡಕುಂಚೆ ಗ್ರಾಮದ ನಟೇಶ ಎಂಬವರ ಜಮೀನಿನಲ್ಲಿ ನಾಟಿ ಮಾಡುವ ಯಂತ್ರದ ಬಳಕೆ, ಕಟಾವು ಯಂತ್ರದ ಬಳಕೆಯನ್ನು ಪ್ರಾಯೋಗಿಕವಾಗಿ ತೋರಿಸಿದ ನಂತರ ಮಾತನಾಡಿ, ಯಂತ್ರಗಳ ಬಳಕೆಯಿಂದ ಕಾರ್ಮಿಕರ ಸಮಸ್ಯೆ ನಿವಾರಿಸಿಕೊಳ್ಳುವುದರ ಜೊತೆಗೆ ನಿಗದಿತ ಸಮಯದಲ್ಲಿ ವೈಜ್ಞಾನಿಕವಾಗಿ ಕೆಲಸ ಮಾಡಿಕೊಂಡು ಉತ್ತಮ ಇಳುವರಿ ಪಡೆಯಬಹುದು. ಇದರಿಂದ ರೈತರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗುತ್ತದೆ. ಮಾಹಿತಿ ಬೇಕಾದ ರೈತರು ಕಚೇರಿ ವೇಳೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ದೊಡ್ಡಕುಂಚೇವು ಗ್ರಾಮದ ನಟೇಶ್ ಮಾತನಾಡಿ, ಯಂತ್ರದ ಮೂಲಕ ಬತ್ತದ ನಾಟಿ ಮಾಡುವುದರಿಂದ ಆಳುಗಳ ಕೊರತೆ ಹೋಗಲಾಡಿಸುವುದರ ಜೊತೆಗೆ ವ್ಯವಸಾಯದ ಖರ್ಚಿನಲ್ಲಿಯೂ ಉಳಿತಾಯ ಮಾಡಬಹುದು. ಆಧುನಿಕ ಬೇಸಾಯಕ್ಕೆ ಕೃಷಿ ಇಲಾಖೆ ಅಧಿಕಾರಿ ಗಳು ಸೂಕ್ತ ಮಾರ್ಗದರ್ಶನ ಹಾಗೂ ಸಬ್ಸಿಡಿ ದರದಲ್ಲಿ ಯಂತ್ರೋಪಕರಣ ಗಳನ್ನು ನೀಡುತ್ತಿದ್ದು ಎಲ್ಲರೂ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಿ ಎಂದು ನುಡಿದರು.
ಹಳ್ಳಿ ಮೈಸೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮುನಿರಾಜು, ಕೃಷಿ ಇಲಾಖೆ ಅಡಿಯಲ್ಲಿ ರೈತರಿಗೆ ದೊರೆಯುವ ಸವಲತ್ತು, ಯಂತ್ರದ ಮೂಲಕ ಬತ್ತದ ನಾಟಿ ಮಾಡಲು ಅನುಸರಿಸಬೇಕಾದ ಕ್ರಮ ಮತ್ತು ಉಪಯೋಗಗಳ ಬಗ್ಗೆ ವಿವರಿಸಿದರು. ದೊಡ್ಡಕುಂಚೇವು ಸುತ್ತಲ ಅನೇಕ ರೈತರು ಭಾಗವಹಿಸಿದ್ದರು. ಕೃಷಿ ಇಲಾಖೆಯ ಎಸ್.ಡಿ. ದ್ಯಾವೇಗೌಡ, ಕೆ.ಎಸ್. ಸ್ವಾಮಿಶೆಟ್ಟಿ, ಕೆ.ಸಿ. ಬಸವರಾಜಯ್ಯ ಗ್ರಾಮದ ಮುಖಂಡರಾದ ಡಿ.ಟಿ. ರಂಗಸ್ವಾಮಿ, ಕುಮಾರ್, ರಂಗಶೆಟ್ಟಿ, ಚನ್ನೇಗೌಡ, ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.