ADVERTISEMENT

ಮಳೆ: ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 5:55 IST
Last Updated 3 ಜೂನ್ 2011, 5:55 IST

ಅರಸೀಕೆರೆ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಎರಡು ದಿನಗಳಿಂದ ಉತ್ತಮ ಮಳೆಯಾಗಿದ್ದು ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ತಾಲ್ಲೂಕಿನಲ್ಲಿ ಬಿಳಿಜೋಳ, ಹೆಸರು, ಎಳ್ಳು, ಅಲಸಂದೆ ಇತ್ಯಾದಿ ಬೆಳೆ ಬೆಳೆಯಲು ಈಗ ಸೂಕ್ತ ವಾತಾವರಣ ಇದ್ದು ರೈತರು ಕೃಷಿ ಕಾಯಕದಲ್ಲಿ ತೊಡಗಿದ್ದು, ತಾಲ್ಲೂಕಿನಲ್ಲಿ ಶೇ 20 ಬಿತ್ತನೆ ಕೆಲಸ ಮುಗಿದಿದೆ. 

ಅರಸೀಕೆರೆ 1.0 ಮಿ,ಮೀ, ಗಂಡಸಿ 21.8, ಕಣಕಟ್ಟೆ 6.8 ಯಳವಾರೆ 3.6 ಮಿ.ಮೀ ಮಳೆಯಾಗಿದೆ. ಕಣಕಟ್ಟೆ ಹೋಬಳಿಯಲ್ಲಿ ಗುರುವಾರದ ಜಿಟಿ,ಜಿಟಿ ಮಳೆಗೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಬಿತ್ತಿರುವ ಬೆಳೆಗಳಿಗೆ ರೋಗ, ಕೀಟ ಬಾಧೆ ನಿವಾರಣೆಗೆ ಕೀಟ ನಾಶಕಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಲಾಟರಿ ಆಯ್ಕೆಗೆ ಅಸಮಾಧಾನ: ಸುವರ್ಣ ಭೂಮಿ ಯೋಜನೆಗೆ ಫಲಾನುಭವಿ ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿದ್ದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿ ಸಿದ್ದಾರೆ.ಇದು ಆಯ್ಕೆಗೆ ಸರಿಯಾದ ಮಾನದಂಡವಲ್ಲ ಎಂದು ರೈತರಾದ ರಂಗಪ್ಪ, ಮರುಳಪ್ಪ, ಯೋಗೀಶ್, ಕೊಟ್ಟೂರಪ್ಪ, ಲಿಂಗರಾಜು ಬೇಸರ ವ್ಯಕ್ತಪಡಿಸಿದರು.
 
ಇದರ ಬದಲು ಪ್ರತಿಯೊಬ್ಬ ರೈತರಿಗೂ ಬಿತ್ತನೆ ಬೀಜ, ರಸ ಗೊಬ್ಬರ ಖರೀದಿಗೆ ರೂ.1000 ನೀಡಬಹುದಿತ್ತು ಎಂದರು.

ಹಾಸನ ವರದಿ:ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಸಕಲೇಶಪುರ ಸುತ್ತಮುತ್ತ ಗುರುವಾರ ಉತ್ತಮ ಮಳೆಯಾಗಿದೆ ಅಲ್ಲದೇ  ನಗರ ಸೇರಿದಂತೆ ವಿವಿಧೆಡೆ ದಿನವಿಡೀ ತುಂತುರು ಮಳೆ, ಮೋಡ ಕವಿದ ವಾತಾವರಣ ಇತ್ತು.

ಸಕಲೇಶಪುರದಲ್ಲಿ ವರುಣನ ಆರ್ಭಟಕ್ಕೆ ಜನ ಜೀವನ ಅಸ್ಥವ್ಯಸ್ಥವಾಗಿತ್ತು. ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸಂಚಾರ ಹರಸಾಹಸವಾಗಿತ್ತು. ಕೆಲ ದಿನಗಳಿಂದ ಮಳೆಯಿಲ್ಲದೇ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳು ಮತ್ತೆ ಗರಿಗೆದರಿವೆ.

ಮಲೆನಾಡು ಪ್ರದೇಶಗಳಲ್ಲಿ ಸತತ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ  ಜನತೆ ಮಳೆಗಾಲಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.  ಅರಸೀಕೆರೆ ಸುತ್ತಮುತ್ತ ಎರಡು ದಿನಗಳಿಂದ ಉತ್ತಮ ಮಳೆಯಾಗಿದ್ದು ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.