ADVERTISEMENT

ಮೈಕ್ರೊ ವಿಮಾ ವಿಭಾಗದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 10:14 IST
Last Updated 1 ಆಗಸ್ಟ್ 2013, 10:14 IST

ನ್ನರಾಯಪಟ್ಟಣ: ಮೈಕ್ರೊ ವಿಮಾ ವಿಭಾಗವು ಗ್ರಾಹಕರು ಮತ್ತು ಏಜೆಂಟರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿ ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಕಚೇರಿ ಮುಂದೆ ಬುಧವಾರ ಗ್ರಾಹಕರು, ಏಜೆಂಟರು ಪ್ರತಿಭಟನೆ ನಡೆಸಿದರು.

ಜೀವ ವಿಮಾ ನಿಗಮದ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಪಟ್ಟಣದಲ್ಲಿದ್ದ `ಮೈಕ್ರೊ ವಿಮಾ ವಿಭಾಗ' ಹಣಕಾಸಿನ ವಿಚಾರದಲ್ಲಿ ಏಜೆಂಟರಿಗೆ, ಗ್ರಾಹಕರಿಗೆ ವಂಚಿಸಿದೆ. ಗ್ರಾಹಕರಿಂದ ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಪಟ್ಟಣದ ಮೈಕ್ರೊ ವಿಮಾ ವಿಭಾಗಕ್ಕೆ ಏಜೆಂಟರು ಪಾವತಿಸಿದ್ದಾರೆ. ಆದರೆ ಈ ಹಣ ಮೈಸೂರಿನಲ್ಲಿರುವ ಪ್ರಾದೇಶಿಕ ಕಚೇರಿಗೆ ಸಮರ್ಪಕವಾಗಿ ಸಂದಾಯವಾಗಿಲ್ಲ. ಭಾರತೀಯ ಜೀವ ವಿಮಾ ನಿಗಮದ ವ್ಯಾಪ್ತಿಗೆ ಮೈಕ್ರೊ ವಿಮಾ ವಿಭಾಗ ಬರುವುದರಿಂದ ಪ್ರೀಮಿಯಂ ಹಣವನ್ನು ಗ್ರಾಹಕರಿಗೆ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿದ್ದ ಮೈಕ್ರೊ ವಿಮಾ ವಿಭಾಗದ ಕಚೇರಿಯ ವಹಿವಾಟು ಸ್ಥಗಿತಗೊಳಿಸಿದ ನಂತರ ಜೀವ ವಿಮಾ ನಿಗಮಕ್ಕೆ ಪ್ರೀಮಿಯಂ ಹಣ ಪಾವತಿಸಲಾಗುತ್ತಿದೆ. ಜೂನ್ 24 ರಂದು ಪ್ರತಿಭಟನೆ ಮಾಡಿ ಹಣ ಹಿಂದಿರುಗಿಸುವಂತೆ ಮನವಿ ಸಲ್ಲಿಸಲಾಗಿತ್ತು. ಇದುವರೆಗೆ ಉತ್ತರ ಬರದಿರುವುದ ರಿಂದ ಮತ್ತೆ ಪ್ರತಿಭಟನೆ ನಡೆಸಬೇಕಾಯಿತು ಎಂದು ಪ್ರತಿಭಟನಾಕಾರರು ದೂರಿದರು.

ಇದಕ್ಕೆ ಉತ್ತರಿಸಿದ ಭಾರತೀಯ ಜೀವ ವಿಮಾ ನಿಗಮದ ವ್ಯವಸ್ಥಾಪಕ ಸಂಜಯ್ ಎಂ. ಮಾನೆ, ಕಳೆದ ತಿಂಗಳು ಪ್ರತಿಭಟನಾಕಾರರು ಸಲ್ಲಿಸಿದ ಮನವಿಯನ್ನು ಮೈಸೂರಿನ ಪ್ರಾದೇಶಿಕ ಕಚೇರಿಗೆ ಕಳುಹಿಸಲಾಗಿದೆ. ಜೀವವಿಮಾ ವಿಭಾಗಕ್ಕೂ ಮೈಕ್ರೊ ವಿಮಾ ವಿಭಾಗಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕಚೇರಿ ಬಾಗಿಲ ಬಳಿ ಧರಣಿ ಕುಳಿತರು. ಸಾರ್ವಜನಿಕರು ಕಚೇರಿಗೆ ಹೋಗುವು ದಕ್ಕೆ ಪ್ರತಿಭಟನಾಕಾರರು ನಿರ್ಬಂಧ ವಿಧಿಸಿದ್ದಾರೆ. ಈ ಬಗ್ಗೆ ಸೂಚನೆ ನೀಡಿದರು ಸಹ ಧರಣಿ ಮುಂದುವರೆಸಿದ್ದರಿಂದ 30 ಪ್ರತಿಭಟನಾಕಾರರನ್ನು ಬಂಧಿಸಿ ಆ ನಂತರ ಅವರನ್ನೆಲ್ಲ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಶ್ರೀರಾಮಸೇನೆ ಅಧ್ಯಕ್ಷ ಹೇಮಂತ್ ಮಾತನಾಡಿ, ಆರು ತಿಂಗಳಿಂದ ನ್ಯಾಯ ಕ್ಕಾಗಿ ಹೋರಾಟ ಮಾಡಿದರು ಅಧಿಕಾರಿಗಳು ಸ್ಪಂಧಿಸುತ್ತಿಲ್ಲ. 2008 ರಿಂದ ಮೋಸ ನಡೆಯು ತ್ತಿದೆ. ಇದು ಗೊತ್ತಿದ್ದರೂ ಕಳೆದ ಒಂದೂವರೆ ವರ್ಷದ ಹಿಂದೆ ಮೈಸೂರಿನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಶ್ರೀಧರ್ ಪಟ್ಟಣದಲ್ಲಿ ಏಜೆಂಟರ ಸಭೆ ನಡೆಸಿ ಗುರುತಿನ ಪತ್ರ ವಿತರಿಸಿದ್ದಾರೆ ಎಂದು ಆಪಾದಿಸಿದರು. ನೊಂದವರಿಗೆ ಕೂಡಲೇ ಹಣ ಹಿಂದಿರುಗಿಸಬೇಕು. ಇಲ್ಲದಿದ್ದರೆ ಚಳವಳಿಯನ್ನು ಮತ್ತೆ ತೀವ್ರಗೊಳಿಸಬೇಕಾಗುತ್ತದೆ ಎಂದರು.

ಆಗಸ್ಟ್ 5 ಕ್ಕೆ ಮೈಸೂರಿನ ಮೈಕ್ರೊ ವಿಮಾ ವಿಭಾಗದ ವ್ಯವಸ್ಥಾಪಕ ಶ್ರೀಧರ್ ಆಗಮಿಸಿ ಚರ್ಚೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಹದೇವಮ್ಮ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.