ADVERTISEMENT

ರೇವಣ್ಣ ಹಲ್ಲೆ: ದೂರು

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 7:25 IST
Last Updated 1 ಜನವರಿ 2011, 7:25 IST

ಹೊಳೆನರಸೀಪುರ: ತಾಲ್ಲೂಕಿನ ಮಾರಗೋಡನಹಳ್ಳಿ ಸಮೀಪ ಶಾಸಕ ಎಚ್.ಡಿ. ರೇವಣ್ಣ ಹಲ್ಲೆ ನಡೆಸಿದರು ಎಂದು ಮಾರಗೋಡನಹಳ್ಳಿ ಗ್ರಾಮದ ಬಿಜೆಪಿ ಬೆಂಬಲಿತ ಯುವಕ ಮಾಲಿಂಗ ಪೊಲೀಸರಿಗೆ ದೂರು ನೀಡಿದ್ದಾರೆ.

“ತಾನು ಬೈಕ್‌ನಲ್ಲಿ ಹೋಗುತ್ತಿದ್ದೆ. ಹಿಂದೆಯಿಂದ ಕಾರಿನಲ್ಲಿ ಬಂದ ಶಾಸಕರು ನನ್ನನ್ನು ತಡೆದು ‘ಏನ್ಲಾ ಬಿಜೆಪಿಗೆ ಓಟ್ ಕೇಳ್ತಿದಿಯಂತೆ’ ಎಂದು ಹೇಳಿ ಕಾರಿನಿಂದ ಇಳಿದು ನಮ್ಮ ಕಪಾಲಕ್ಕೆ ಹೊಡೆದು, ‘ಇವನನ್ನು ಚಚ್ರಿ’ ಎಂದು ಅವರ ಅಂಗರಕ್ಷಕರಿಗೆ ಹೇಳುತ್ತಿದ್ದಂತೆ ಅವರು ಮನಸೋ ಇಚ್ಛೆ ಹೊಡೆದು ಕಾಲಲ್ಲಿ ಒದ್ದು, ಬಂದೂಕಿನ ಹಿಂಬದಿಯಿಂದ ಗುದ್ದಿ ಗಾಯಗೊಳಿಸಿದರು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ಪಡವಲಹಿಪ್ಪೆಯಲ್ಲಿ ಮತದಾನದ ವೇಳೆ ವ್ಯಾಪಕ ಅಕ್ರಮ ನಡೆದಿದೆ. ಮಾರಗೋಡನಹಳ್ಳಿ ಮತ್ತು ಮಾಕವಳ್ಳಿ ಜನರಿಗೆ ಪಡವಲಹಿಪ್ಪೆಯ ರೇವಣ್ಣನ ಬೆಂಬಲಿಗರು ಮತಹಾಕಲು ಬಿಟ್ಟಿಲ್ಲ. ಇಲ್ಲಿ ಮರು ಮತದಾನ ನಡೆಯಲೇ ಬೇಕು. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ನಾವು ಇಂದು ಮುಷ್ಕರ ಮಾಡುವ ನಿರ್ಧಾರವನ್ನು ಕೈಬಿಟ್ಟಿದ್ದೇವೆ’ ಎಂದು ಮೂಡಲಹಿಪ್ಪೆ ಜಿಲ್ಲಾ ಪಂಚಾಯ್ತಿ ಅಭ್ಯರ್ಥಿ ಎಂ.ಎನ್. ರಾಜು ತಿಳಿಸಿದ್ದಾರೆ.

‘ಮೂಡಲಮಾಯಗೋಡನಹಳ್ಳಿ ಗ್ರಾಮದಲ್ಲೂ ಅಕ್ರಮವಾಗಿ ಮತಹಾಕಲು ಬಂದಿದ್ದ ತನ್ನ ಮೇಲೆ ಜೆಡಿಎಸ್ ಬೆಂಬಲಿಗರು ಮಚ್ಚಿನಿಂದ ಹಲ್ಲೆ ನಡೆಸಿದರು’ ಎಂದು ಗ್ರಾಮದ ಸಣ್ಣತಮ್ಮೇಗೌಡ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರ ಆರೋಗ್ಯ ವಿಚಾರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.