ADVERTISEMENT

ವೀರಶೈವ ಮಠಗಳಿಗೆ ನೆರವು ನೀಡದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 8:04 IST
Last Updated 24 ನವೆಂಬರ್ 2017, 8:04 IST

ಬೇಲೂರು: ‘ಸಿರಿವಂತ ಮಠಗಳು ಎಂಬ ಕಾರಣಕ್ಕೆ ವೀರಶೈವ ಮಠಗಳಿಗೆ ಸರ್ಕಾರ ನೆರವು ನೀಡುತ್ತಿಲ್ಲ’ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠಾಧೀಶರಾದ ಡಾ.ಅನ್ನದಾನೀಶ್ವರ ಮಹಾ ಶಿವಯೋಗಿ ಸ್ವಾಮೀಜಿ ಆರೋಪಿಸಿದರು.

ತಾಲ್ಲೂಕಿನ ಬಿಕ್ಕೋಡಿನಲ್ಲಿರುವ ಕೋಡಿಮಠದ ಶಾಖಾಮಠವಾದ ವಿರಕ್ತ ದೊಡ್ಡ ಮಠದಲ್ಲಿ ಬುಧವಾರ ರಾತ್ರಿ ನಡೆದ ಲಕ್ಷದೀಪೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಠ ಮಾನ್ಯಗಳಿಗೆ ರಾಜಮಹಾರಾಜರು ಹಿಂದೆ ಗೌರವ ನೀಡುತ್ತಿದ್ದರು. ಇಂದಿನ ಸರ್ಕಾರಗಳು ಮಠಮಾನ್ಯಗಳಿಗೆ ನೆರವಿನ ಹಸ್ತ ಚಾಚುತ್ತಿಲ್ಲ. ಆದರೂ ಮಠಗಳು ಸರ್ಕಾರಗಳತ್ತ ಕೈಯ್ಯೊಡ್ಡುವ ಕೆಲಸ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ADVERTISEMENT

ಸಮಾಜದಲ್ಲಿ ಎಲ್ಲವೂ ವ್ಯಾವಹಾರಿಕವಾಗಿಯೇ ನಡೆಯುತ್ತಿವೆ. ಸಂಬಂಧಗಳು ಹಾದಿ ತಪ್ಪುತ್ತಿವೆ. ಅಂತರಂಗದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ದೀಪವನ್ನು ಹಚ್ಚುವ ಕೆಲಸ ಆಗಬೇಕಿದೆ ಎಂದರು.

ಧರ್ಮ ಸಂದೇಶಗಳು ಮಾನವನನ್ನು ತಲುಪಬೇಕು. ಹಾಗಾದಾಗ ಮಾತ್ರ ಸಮಾಜ ಸರಿದಾರಿಯಲ್ಲಿ ನಡೆಯುತ್ತದೆ. ಕತ್ತಲೆಯನ್ನು ತೊಳೆಯಲು ಆತ್ಮಜ್ಞಾನದ ಅರಿವು ಆಗಬೇಕು ಎಂದು ನುಡಿದರು.

ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ಮೂರು ಕಳಸದ ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಸಂಕಲಾಪುರ ಮಠದ ಧರ್ಮರಾಜೇಂದ್ರ ಮಹಾಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ ಶಿವಾಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಕತ್ರಿಘಟ್ಟದ ಚಂದ್ರಶೇಖರ ಗುರೂಜಿ, ಮೌಲ್ವಿ ಇಬ್ರಾಹಿಂ ಮುಸಲಿಯಾರ್‌, ಜಿ.ಪಂ. ಸದಸ್ಯ ರತ್ನಮ್ಮ ಐಸಾಮಿ ಗೌಡ, ತಾ.ಪಂ. ಅಧ್ಯಕ್ಷ ಪಿ.ಎಸ್‌.ಹರೀಶ್‌, ಉಪಾಧ್ಯಕ್ಷೆ ತೀರ್ಥಮ್ಮ, ಬಿಕ್ಕೋಡು ಗ್ರಾ.ಪಂ. ಅಧ್ಯಕ್ಷ ಯುವರಾಜು, ಕಾಫಿ ಬೆಳೆಗಾರ ಎಂ.ಎಸ್‌.ಪರಮಶಿವಪ್ಪ, ವೀರಶೈವ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಐಸಾಮಿಗೌಡ, ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಎಂ.ದಯಾನಂದ್‌, ಪ್ರಮುಖರಾದ ಗಣೇಶ್‌, ಜೆ.ಸಿ.ಮೋಹನ್‌ಕುಮಾರ್‌, ಬಿಕ್ಕೋಡು ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.