ADVERTISEMENT

‘ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ’

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 5:57 IST
Last Updated 26 ಜುಲೈ 2025, 5:57 IST
ಹಿರೀಸಾವೆಯಲ್ಲಿ ಶುಕ್ರವಾರ ನಡೆದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ತಮ್ಮಣ್ಣಗೌಡ ಮಾತನಾಡಿದರು
ಹಿರೀಸಾವೆಯಲ್ಲಿ ಶುಕ್ರವಾರ ನಡೆದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ತಮ್ಮಣ್ಣಗೌಡ ಮಾತನಾಡಿದರು   

ಹಿರೀಸಾವೆ: ‘ವೃದ್ಧಾಶ್ರಮಗಳಿಗೆ ಹೋಗದಂತೆ ಇರಬೇಕು ಎಂದರೆ, ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಹೊಸೂರು ತಮ್ಮಣ್ಣಗೌಡ ಹೇಳಿದರು.

ಹೋಬಳಿಯ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ನಡೆದ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದಿನ ಕಾಲದಲ್ಲಿ ವಾನಪ್ರಸ್ಥ ಇದ್ದಂತೆ, ಈಗ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ನಾವು ಹೇಳಿದನ್ನು ಮಕ್ಕಳು ಕಲಿಯುತ್ತಿದ್ದಾರೆ. ನಿವೃತ್ತಿಯ ನಂತರ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಸಮ ವಯಸ್ಸಿನವರು ಬೇಕು. ಇದಕ್ಕೆ ಸಂಘ ಉತ್ತಮ ಕಾರ್ಯಚಟುವಟಿಕೆ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸರಳವಾದ ಬದುಕು ಮತ್ತು ರಾಸಾಯನಿಕ ಮುಕ್ತ ಆಹಾರಗಳನ್ನು ಸೇವನೆ ಮಾಡುವ ಮೂಲಕ ಆರೋಗ್ಯಯುತ ಜೀವನ ನಡೆಸಬಹುದು. ನಿವೃತ್ತಿಯಾದ ನಂತರ ಮನೆಯಲ್ಲಿ ಕೂರುವ ಬದಲು, ಸಭೆ, ಸಮಾರಂಭದಲ್ಲಿ ಭಾಗವಹಿಸಿ, ಬಂಧುಗಳು, ಸ್ನೇಹಿತರೊಂದಿಗೆ ಕಾಲ ಕಳೆಯಬೇಕು’ ಎಂದು ನಿವೃತ್ತ ಡಿಡಿಪಿಐ ನಿಂಬೆಹಳ್ಳಿ ಚಂದ್ರೇಗೌಡ ಕಿವಿಮಾತು ಹೇಳಿದರು.

ಸಂಘದ ಅಧ್ಯಕ್ಷ ಎಂ. ರಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ಹಿರೀಸಾವೆ ಶಾಖಾ ವ್ಯವಸ್ಥಾಪಕ ಎಸ್. ಮುತ್ತುರಾಜ್, ಹಿರಿಯ ಸದಸ್ಯರಾದ ಕೆ.ಎಚ್. ಸುಬ್ಬರಾಮು, ಎಚ್.ವಿ. ಕೃಷ್ಣೇಗೌಡ, ಎಚ್.ಆರ್. ಚದ್ರೇಗೌಡ, ಜೆ. ಮಂಜಪ್ಪ, ಮಲ್ಲಿಕಾರ್ಜುನಪ್ಪ, ಜೆ.ಟಿ. ಕೃಷ್ಣೇಗೌಡ, ಎಚ್.ಬಿ. ಚಂದ್ರಶೇಖರ್ ಇದ್ದರು.

ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎ.ಎಚ್. ಶ್ರೀನಿವಾಸ್ ವಾರ್ಷಿಕ ವರದಿ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.