ಹಾಸನ: ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೊದಲ ಬ್ಯಾಚ್ನ 95 ವಿದ್ಯಾರ್ಥಿಗಳಿಗೆ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಭವ್ಯ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಯಿತು.
ಸಂಸ್ಥೆಯ ಮೊದಲ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಸ್. ಶ್ರೀಪ್ರಕಾಶ್, `ಹಳೆಯ ಸಮಸ್ಯೆಗಳ ಜತೆಗೆ ದಿನೇ ದಿನೇ ಮಾನವನನ್ನು ಕಾಡುವ ಹೊಸಹೊಸ ರೋಗಗಳನ್ನು ನಿಯಂತ್ರಿಸುವುದು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳು ಮತ್ತು ಹೊಸ ತಂತ್ರಜ್ಞಾನವನ್ನು ಕೈಗೆಟಕುವ ದರದಲ್ಲಿ ಜನರಿಗೆ ತಲುಪಿಸುವ ಜವಾಬ್ದಾರಿ ವೈದ್ಯರ ಮೇಲಿದೆ~ ಎಂದರು.
`ಇಂದು ಕಲಿತ ವೈದ್ಯಕೀಯ ಜ್ಞಾನ ಮೂರು ನಾಲ್ಕು ವರ್ಷಗಳಲ್ಲಿ ಹಳೆಯದಾಗುತ್ತದೆ. ಆದ್ದರಿಂದ ವೈದ್ಯರು ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳುವುದು ಅನಿವಾರ್ಯ. ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗುವುದರ ಜತೆಗೆ ಹೊಸ ಹೊಸ ಸಂಶೋಧನೆಗಳನ್ನು ಮಾಡುತ್ತ, ಆ ಬಗ್ಗೆ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸುತ್ತ ಈ ಕ್ಷೇತ್ರದಲ್ಲಿ ಬೆಳೆಯುವುದು ವಿದ್ಯಾರ್ಥಿಗಳ ಗುರಿಯಾಗಬೇಕು ಎಂದು ನುಡಿದರು.
`ಇಂದಿನ ಶತಮಾನದಲ್ಲಿ ಜ್ಞಾನವೇ ಶಕ್ತಿ. ಜ್ಞಾನವನ್ನು ವೃದ್ಧಿಸಿಕೊಳ್ಳುವುದರ ಜತೆಗೆ ಒಳ್ಳೆಯ ಸಂವಹನ ಕಲೆ ಹಾಗೂ ಒಂದು ತಂಡವಾಗಿ ದುಡಿಯುವ ಚಾಕಚಕ್ಯತೆ ರೂಢಿ ಸಿಕೊಂಡಲ್ಲಿ ಮಾತ್ರ ವೈದ್ಯನಾಗಿ ಯಶಸ್ಸುಗಳಿಸಲು ಸಾಧ್ಯ. ಇವುಗಳ ಜತೆಗೆ ದೇಶದ ಕಾನೂನಿನ ಕನಿಷ್ಠ ಜ್ಞಾನವನ್ನು ಹೊಂದುವುದೂ ಅಗತ್ಯ~ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ (ವೈದ್ಯಕೀಯ ಶಿಕ್ಷಣ) ಕೆ.ಎಚ್. ಗೋಪಾಲಕೃಷ್ಣೆಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್, ಆರೋಗ್ಯ ವಿ.ವಿ. ಕುಲಸಚಿವ ಡಾ. ಡಿ. ಪ್ರೇಮ್ ಕುಮಾರ್ ಹಾಗೂ ಹಾಸನ ವೈದ್ಯಕೀಯ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ. ಶಂಕರ್ ವೇದಿಕೆಯಲ್ಲಿದ್ದರು. ಹಿಮ್ಸ ನಿರ್ದೇಶಕ ಡಾ. ರವಿಕುಮಾರ್ ಬಿ.ಸಿ. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ಪಾಲಕರು, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.